ಕಾರವಾರ: ಅಂಗಡಿಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದೊಳಗೆ ಹಾವೊಂದು ಗಂಟೆಗಟ್ಟಲೆ ಅವಿತು ಕುಳಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಶಿರಸಿಯ ಸಿ.ಪಿ. ಬಜಾರ್ ರಸ್ತೆಯ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಆಭರಣ ಹಾವು ಅವಿತು ಕುಳಿತ್ತಿತ್ತು. ಇದನ್ನು ನೋಡಿದ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದ ಜನರು ಅದನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾರೊಬ್ಬರ ಹೆದರಿಕೆಗೂ ಬಗ್ಗದ ಹಾವು ಸ್ಕೂಟಿಯೊಳಗೆ ಸೇರಿ ಬೆಚ್ಚಗೆ ಕುಳಿತಿತ್ತು.
ತಕ್ಷಣವೇ ವ್ಯಕ್ತಿಯೊಬ್ಬರು ಉರಗತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಪ್ರಶಾಂತ್ ಸ್ಥಳಕ್ಕೆ ಆಗಮಿಸಿ, ಆಭರಣ ಹಾವನ್ನು ದ್ವಿಚಕ್ರ ವಾಹನದಿಂದ ಹೊರಗೆ ತೆಗೆದು, ರಕ್ಷಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.