ವಿಜಯಪುರ: ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡುವುದು ತಪ್ಪು ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕ್ ಹಾಗೂ ಕಾಶ್ಮೀರಿ ಭಯೋತ್ಪಾದಕರ ಪರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಘಟನೆಗೆ ಗೌರ್ನರ್ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅದರ ಕುರಿತು ಸಮಗ್ರ ತನಿಖೆ ಆಗಬೇಕು. ಕಳೆದ 30 ವರ್ಷಗಳಿಂದ ಕೂಡಾ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಹೀಗಾಗಿ ಅದರ ಮೂಲ ಎಲ್ಲಿದೆ ಎಂದು ಕುಂಡು ಹಿಡಿಯಬೇಕು. ಇದಲ್ಲದೆ ಕಳೆದ 4 ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗಿದೆ. ಮೊದಲು ಇವುಗಳ ಮೂಲ ಕಂಡು ಹಿಡಿಯಬೇಕು. ಅದನ್ನು ಹೊರತುಪಡಿಸಿ ಪಾಕ್ ಹಾಗೂ ಮುಸ್ಲೀಂರ ಮೇಲೆ ಬೊಟ್ಟು ಮಾಡಿ ತೋರಿಸುವುದರಿಂದ ಉಪಯೋಗವಿಲ್ಲ. ಭಾರತ ಸರ್ಕಾರ ಪಾಕಿಸ್ತಾನಕ್ಕೆ ಗುರಿಮಾಡಿ ಮಾತಾಡುವುದು ತಪ್ಪು ಎಂದು ಪಾಟೀಲ್ ಗಣಿಹಾರ್ ಹೇಳಿದ್ದಾರೆ.
ಮಕ್ಕಳನ್ನ ಬಗಲಲ್ಲಿ ಇಟ್ಟುಕೊಂಡು ಬಂದು ಹೆಣ್ಣು ಮಕ್ಕಳು ಪೊಲೀಸರು ಮತ್ತು ಯೋಧರ ಮೇಲೆ ಕಲ್ಲು ತೂರುತ್ತಿದ್ದಾರೆ. ಅವರಿಗೂ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟುತ್ತಿದ್ದೀರಿ. ಕೇವಲ ಹಣೆಪಟ್ಟಿ ಕಟ್ಟುವುದಲ್ಲ, ಯಾಕೆ ಮಕ್ಕಳನ್ನ ಕರೆದುಕೊಂಡು ಬರುತ್ತಿದ್ದಾರೆ, ಯಾಕೆ ಭಯೋತ್ಪಾದಕರು ಹೆಚ್ಚುಗುತ್ತಿದ್ದಾರೆ ಎಂಬುದನ್ನ ಕಂಡುಹಿಡಿಯಬೇಕು. ಕಾಶ್ಮೀರಿಗಳನ್ನ ಭಾರತೀಯರನ್ನಾಗಿ ಮಾಡಿದಾಗ ಇದಕ್ಕೆ ಪರಿಹಾರ ಇದೆ. ಭಾರತದಲ್ಲಿ ಧ್ವಜ ಹಿಡಿದುಕೊಂಡು ಓಡಾಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಸ್.ಎಂ ಪಾಟೀಲ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಅವರ ವಿರುದ್ಧ ದೂರು ದಾಖಲಿಸಲು ದೇಶಭಕ್ತರು ಆಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv