ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಇಂದು ತಮ್ಮ 88ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಸಂಬಂಧಿಕರು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಎಂ ಕೃಷ್ಣ, ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಇತರ ಬಿಜೆಪಿ ನಾಯಕರು ಮನೆಗೆ ಬಂದು ನನಗೆ ಶುಭಾಶಯ ತಿಳಿಸುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಜನ್ಮದಿನದ ದಿನ ಬೆಂಗಳೂರಿನಲ್ಲಿ ಇರುತ್ತಿರಲಿಲ್ಲ. ಇದು ಯಾರಿಗೂ ಗೊತ್ತಾಗಬಾರದೆಂದು ಸುಮ್ಮನಿದ್ದೆ. ಆದರೆ ಇದೀಗ ನನ್ನ ಜನ್ಮ ದಿನ ಇಂದು ಎಂದು ಬಹಿರಂಗವಾಗಿದೆ. ಹೀಗಾಗಿ ನನ್ನ ಎಲ್ಲಾ ಸಹೃದಯಿ ನಾಯಕರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ ಎಂದರು.
ನಿಮ್ಮ ಆಶೀರ್ವಾದಿಂದ ನಾನು ಇನ್ನೂ ಕೆಲವು ಕಾಲ ಸಾರ್ವಜನಿಕ ಜೀವನದಲ್ಲಿ ಬಹಳ ಉತ್ಸಾಹದಿಂದ ಬಿಜೆಪಿಯ ನೇತೃತ್ವ, ನರೇಂದ್ರ ಮೋದಿಯವರ ಮತ್ತೆ 5 ವರ್ಷಗಳ ಪ್ರಧಾನಮಂತ್ರಿ ಆಗಬಹುದಾಂತಹ ನಮ್ಮ ನಿರೀಕ್ಷೆ ಇದ್ದು, ಒಟ್ಟಿನಲ್ಲಿ ರಾಜಕೀಯ ವಿದ್ಯಮಾನಗಳನ್ನು ಗಮನವಿಟ್ಟು ನೋಡುತ್ತೇನೆ. ಹಾಗೆಯೇ ನಮ್ಮ ರಾಜ್ಯದಲ್ಲೂ ಈ ಚುನಾವಣೆ ಮುಗಿದ ಮೇಲೆ ಏನೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದನ್ನು ಬಹಳ ಕುತೂಹಲದಿಂದ ನೋಡುತ್ತಾ ಇರುತ್ತೇನೆ ಎಂದು ಹೇಳಿದರು.
ಕೇಕ್ ಕಟ್ ಮಾಡಿ ಆಚರಣೆ:
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ರವಿಸುಬ್ರಮಣ್ಯ, ಡಾ. ಅಶ್ವಥ್ ನಾರಾಯಣ್, ಸಂಸದ ಪಿ.ಸಿ. ಮೋಹನ್ ಮತ್ತು ಇತರ ಬಿಜೆಪಿ ಮುಖಂಡರು ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್ಎಂಕೆ ನಿವಾಸಕ್ಕೆ ಭೇಟಿ ನೀಡಿ ಕೇಕ್ ಕಟ್ ಮಾಡುವ ಮೂಲಕ ಶುಭಾಶಯ ತಿಳಿಸಿದರು.
ಬಳಿಕ ಮಾತನಾಡಿದ ಯಡಿಯೂರಪ್ಪ, ಕೃಷ್ಣ ಅವರ 88 ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಅವರು 100 ವರ್ಷ ಬಾಳಿ ನಮಗೆ ಹರಸಬೇಕು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು 22 ಜಿಲ್ಲೆಯಲ್ಲಿ ಸುತ್ತಾಡಿ ನಮಗೆ ಬಲ ತಂದಿದ್ದಾರೆ. ಎಸ್ ಎಂಕೆ ಬಲದಿಂದ ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ಬೀಳುತ್ತದೆ. ಆದರೆ ನಾವು ಬೀಳಿಸಲ್ಲ. ಕಾಣದ ಕೈ ಸರ್ಕಾರವನ್ನು ಬೀಳಿಸುತ್ತದೆ. ಆ `ಕೈ’ ಕಾಂಗ್ರೆಸ್ ನಲ್ಲಿಯೇ ಇದೆ. ಮೈಸೂರು ಅಷ್ಟೇ ಅಲ್ಲ ಮಂಡ್ಯ ಸೇರಿದಂತೆ ಎಲ್ಲ ಕಡೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಹೇಳಿದರು.