ರಾಯಚೂರು: ಜಿಲ್ಲೆಯಲ್ಲಿ ಸ್ಲಂ ಬೋರ್ಡ್ ಮನೆಗಳು ಜೀವಕ್ಕೆ ಮಾರಕವಾಗಿವೆ. ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಗರದ ಸಿಯಾತಲಾಬ್ ಪ್ರದೇಶದ ರಾಜೀವ್ ನಗರದಲ್ಲಿ ಸ್ಲಂ ಬೋರ್ಡ್ ನಿರ್ಮಿಸಿದ್ದ ಮನೆಯೊಂದು ಕುಸಿದು ಓರ್ವ ಬಾಲಕನ ಬಲಿ ಪಡೆದಿದೆ. ಐದು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. 7 ವರ್ಷದ ವಿಕಾಶ್ ಮೃತ ದುರ್ದೈವಿ. ಮೀನಮ್ಮ, ಸ್ವಾತಿ, ಕಾರ್ತಿಕ್, ಈರಮ್ಮ, ಶ್ವೇತಾ ಗಂಭೀರ ಗಾಯಗೊಂಡವರು. ಇದನ್ನೂ ಓದಿ: ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
ಕಟ್ಟಡದ ಮೆಟ್ಟಿಲು ಮೇಲೆ ಹತ್ತು ಹದಿನೈದು ಜನ ನಿಂತಿದ್ದ ವೇಳೆ ಛಾವಣಿ ಕುಸಿದು ಬಿದ್ದಿದೆ. ಕೆಳಗಡೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದು ಬಿದ್ದಿರುವುದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆಯ ಬಳಿಕ ಇಲ್ಲಿನ 108 ಕುಟುಂಬಗಳು ಜೀವಭಯದಲ್ಲಿ ವಾಸಿಸುತ್ತಿವೆ.
ಬಾಲಕನ ಸಾವಿನಿಂದ ಮೃತನ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ರಾಜೀವ್ ನಗರ ಸ್ಲಂನಲ್ಲಿ ಸ್ಲಂಬೋರ್ಡ್ ನಿರ್ಮಿಸಿದ ಮನೆಗಳಲ್ಲಿ 108 ಕುಟುಂಬಗಳು ವಾಸಿಸುತ್ತಿದ್ದು. ಈಗ ಎಲ್ಲರಿಗೂ ಜೀವ ಭಯ ಕಾಡುತ್ತಿದೆ. ಎಲ್ಲಾ ಮನೆಗಳು ಬಿರುಕು ಬಿಟ್ಟಿದ್ದು ಯಾವ ಸಮಯದಲ್ಲಿ ಬೇಕಾದರೂ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಕೂಡಲೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ರಜನಿಕಾಂತ್ ಸಿಎಂ ಪರಿಹಾರ ನಿಧಿಯಿಂದ ಮೃತನ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಇನ್ನೂ ನಿವಾಸಿಗಳ ಸ್ಥಳಾಂತರದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಜನಿಕಾಂತ್ ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ
ಸ್ಥಳಕ್ಕೆ ರಾಯಚೂರು ತಹಶೀಲ್ದಾರ್ ಹಂಪಣ್ಣ ಸಜ್ಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ಮೃತನ ಕುಟುಂಬಕ್ಕೆ ಪರಿಹಾರ ಹಾಗೂ ಬಡ ಕೂಲಿ ಜನರಿಗೆ ಇಲ್ಲಿಂದ ಸ್ಥಳಾಂತರದ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.