– ಕನ್ನಡ ಸಾಹಿತ್ಯ ಲೋಕದ ʻಪರ್ವʼ ಯುಗಾಂತ್ಯ
ಮೈಸೂರು: ಬದುಕಿನ ʻಯಾನʼ ಮುಗಿಸಿದ `ಅಕ್ಷರ ಮಾಂತ್ರಿಕ’ ಎಸ್.ಎಲ್ ಭೈರಪ್ಪ (SL Bhyrappa) ಪಂಚಭೂತಗಳಲ್ಲಿ ಲೀನವಾಗಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪಾರ್ಥಿವ ಶರೀರಕ್ಕೆ ಮಾನಸ ಪುತ್ರಿ ಸಹನಾ ವಿಜಯಕುಮಾರ್ ಅವರು ಅಂತಿಮ ನಮನ ಸಲ್ಲಿಸಿದ ಬಳಿಕ ಪುತ್ರರು ಅಗ್ನಿಸ್ಪರ್ಶ ಮಾಡಿದರು.
ಇಂದು ಬೆಳಗ್ಗೆಯಿಂದಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿತ್ತು. ಕುಟುಂಬಸ್ಥರು, ಗಣ್ಯರು ಅಂತ್ಯಸಂಸ್ಕಾರ ವೀಕ್ಷಣೆಗೆ ಜರ್ಮನ್ ಟೆಂಟ್ ಹಾಕಿ ಕುರ್ಚಿಗಳನ್ನಿಟ್ಟು ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಎಡಿಸಿ ಶಿವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಸಕಲ ಸಿದ್ಧತೆ ಪರಿಶೀಲಿಸಿದ್ದರು, ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿತ್ತು.
ನಂತರ ಭೈರಪ್ಪನವರ ಪಾರ್ಥೀವ ಶರೀರದ ಮೇಲೆ ತ್ರಿವರ್ಣಧ್ವಜ ಹೊದಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಚಿತಾಗಾರದ ಬಳಿಕ ಪೊಲೀಸ್ ತುಕಡಿ ಪೊಲೀಸ್ ಬ್ಯಾಂಡ್ ನಡೆಸಿಕೊಟ್ಟರು. ಬಳಿಕ ಬೈರಪ್ಪ ಪುತ್ತರ ಕೈಗೆ ಪೊಲೀಸರು ರಾಷ್ಟ್ರಧ್ವಜ ಹಸ್ತಾಂತರಿಸಿದರು.
ಈ ಪ್ರಕ್ರಿಯೆ ಮುಗಿದ ಬಳಿಕ ಭೈರಪ್ಪ ಪುತ್ರರಾದ ಉದಯ್ ಶಂಕರ್, ರವಿಶಂಕರ್, ಮಾನಸ ಪುತ್ರಿ ಸಹಾನ ವಿಜಯ್ ಕುಮಾರ್, ತೇಜಸ್ವಿನಿ ಅನಂತ ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಬಳಿಕ ಇಬ್ಬರು ಪುತ್ರರು ಭೈರಪ್ಪ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು.
ಇನ್ನೂ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.