ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನವಿಲ್ಲದ ಕುಟುಂಬಗಳಿಗೆ, ಗೋಮಾಳದಲ್ಲಿ ನಿವೇಶನ ಹಂಚಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮ ಪಂಚಾಯತಿಯಲ್ಲಿ ಸರ್ವೇ ನಂಬರ್ 256 ಹಾಗೂ 257 ರಲ್ಲಿನ ಒಟ್ಟು 6.10 ಎಕರೆ ಜಮೀನಿಗೆ 656 ಫಲಾನುಭವಿಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪಂಚಾಯತಿ, ಅರ್ಜಿಗಳನ್ನು ಪಡೆದು ಕಸದ ಬುಟ್ಟಿಗೆ ಹಾಕಿದ್ದಾರೆ ಹಾಗೂ ಮಾಜಿ ಸೈನಿಕರಿಗೆ ಜಮೀನು ಎಂದು ಹೇಳಿ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು.
ಕೆಲ ಸಮಯ ಸಭೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ನಿವೇಶನ ಹಂಚಿಕೆ ಬಗ್ಗೆ ಇಲಾಖೆಗೆ ಕಡತಗಳನ್ನು ಬೇಜವಬ್ದಾರಿತನದಿಂದ ವರ್ಗಾಯಿಸಲಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥ ತಿಮ್ಮರಾಯಪ್ಪ ಆರೋಪಿಸಿದರು. ಆಗ ಸಭೆಯಲ್ಲಿ ವಾಗ್ವಾದ ನಡೆಯಿತು. ಬೇಗೂರು ಗ್ರಾಮ ಪಂಚಾಯತಿಯ 12 ಗ್ರಾಮಗಳಿಗೆ ಈ ನಿವೇಶನ ಹಂಚಿಕೆಯಾಗಬೇಕಿತ್ತು. ಆದರೆ ಬಲಾಢ್ಯರ ಪರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಎಲ್ಲ ವಿಷಯವನ್ನು ಆಧರಿಸಿ ಮತ್ತೊಂದು ಸಭೆ ನಡೆಸಿ ನಂತರ ನಿವೇಶನ ಹಂಚಿಕೆ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಆಗ ಸಭೆ ಶಾಂತಯುತವಾಗಿ ನಡೆಯಿತು.