ಚಂಡೀಗಢ: ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬದಲ್ ಹಾಗೂ ಅವರ ಪುತ್ರ ಸುಖಬೀರ್ ಸಿಂಗ್ ಬದಲ್ ಗೆ ವಿಶೇಷ ತನಿಖಾ ತಂಡ(ಎಸ್ಐಟಿ) ಸಮನ್ಸ್ ಜಾರಿಮಾಡಿದೆ.
2015 ರಲ್ಲಿ ಪಂಜಾಬಿನ ಫರೀದ್ಕೋಟ್ ಜಿಲ್ಲೆಯಲ್ಲಿ ನಡೆದ ಪೊಲೀಸರ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಎಸ್ಐಟಿ ತನಿಖೆ ನಡೆಸುತ್ತಿತ್ತು. ಈ ಸಂಬಂಧ ಅಕ್ಷಯ್ ಕುಮಾರ್ ಸೇರಿದಂತೆ ಮೂವರಿಗೆ ಸಮನ್ಸ್ ಜಾರಿಮಾಡಿದೆ.
ತನಿಖಾಧಿಕಾರಿಯಾದ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಪ್ರತಾಪ್ ಸಿಂಗ್ ಮುಂದೆ ಅಮೃತಸರ್ ದಲ್ಲಿರುವ ಸರ್ಕ್ಯೂಟ್ ಹೌಸ್ನಲ್ಲಿ ವಿಚಾರಣೆಗೆ ಆಗಮಿಸುವಂತೆ ಎಸ್ಐಟಿ ಹೇಳಿತ್ತು. ಅಲ್ಲದೇ ನವೆಂಬರ್ 19ಕ್ಕೆ ಪ್ರಕಾಶ್ ಸಿಂಗ್ ಬದಲ್, ನ.19ಕ್ಕೆ ಸುಖಬೀರ್ ಬದಲ್ ಹಾಗೂ ನ.21ಕ್ಕೆ ಅಕ್ಷಯ್ ಕುಮಾರ್ ಗೆ ಹಾಜರಾಗಲೂ ಸೂಚಿಸಿದೆ.
ಈ ಕುರಿತು ಪ್ರತಿಕ್ರಯಿಸಿರುವ ಐಜಿ, ಕಾನೂನು ಎಲ್ಲರಿಗೂ ಒಂದೇ. ನಮ್ಮ ತನಿಖೆ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ನಡೆಯುತ್ತದೆ. ವಿಚಾರಣೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆಂದು ಹೇಳಿದ್ದಾರೆ.
ಏನಿದು ಗೋಲಿಬಾರ್ ಪ್ರಕರಣ?
2015ರ ಫರೀದ್ಕೋಟ್ ಜಿಲ್ಲೆಯ ಹಾಲ್ ಕಲನ್ ಗ್ರಾಮದಲ್ಲಿ ಸಿಖ್ಖರ ಪವಿತ್ರ ಗ್ರಂಥ ‘ಗುರು ಗ್ರಂಥ ಸಾಹಿಬ್’ ಅನ್ನು ಅಪವಿತ್ರಗೊಳಿಸಿದ್ದಾರೆಂದು, ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿತ್ತು, ಹೀಗಾಗಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದರು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.
ಅಕ್ಷಯ್ ಕುಮಾರ್ ಹೆಸರು ಬಂದಿದ್ದೇಗೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಂಜಿತ್ ಸಿಂಗ್ ಅವರ ಕಮಿಷನ್ ವರದಿಯಲ್ಲಿ ನಟ ಅಕ್ಷಯ್ ಕುಮಾರ್ ಹೆಸರನ್ನು ಉಲ್ಲೇಖಿಸಲಾಗಿತ್ತು. ವರದಿಯ ಪ್ರಕಾರ ಮುಂಬೈನಲ್ಲಿರುವ ನಟ ಅಕ್ಷಯ್ ಕುಮಾರ್ ಫ್ಲಾಟ್ ನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಹಾಗೂ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೊತೆ ಎಂಎಂಜಿ ಸಿನೆಮಾ ಬಿಡುಗಡೆಯ ಸಂಬಂಧ ಸಭೆ ನಡೆಸಿದ್ದರು.
ಧರ್ಮ ನಿಂದನೆ ಪ್ರಕರಣದಲ್ಲಿ ಗುರ್ಮಿತ್ ಸಿಂಗ್ ಅವರಿಗೆ ಕ್ಷಮಾಧಾನ ಸಿಗುವುದಕ್ಕೂ ಮುನ್ನ ಸಭೆ ನಡೆದಿತ್ತು ಎನ್ನಲಾಗುತ್ತಿದೆ. ಆದರೆ ಈ ಆರೋಪಗಳನ್ನು ನಟ ಅಕ್ಷಯ್ ಕುಮಾರ್ ತಳ್ಳಿ ಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews