ಕಾರವಾರ: ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಒಂಬತ್ತು ದಿನಗಳ ಮಾರಿಕಾಂಬಾ ದೇವಿಯ ಉತ್ಸವ ಇಂದು ಅತ್ಯಂತ ವಿಜೃಂಭಣೆಯಿಂದ ಆರಂಭವಾಗಿದೆ.
ಸರ್ವಾಭಿಷ್ಟವನ್ನು ಸಿದ್ಧಿಸುತ್ತಾಳೆ ಎಂಬ ನಂಬಿಕೆಯಿಂದ ರಾಜ್ಯ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರ, ಕೇರಳದಿಂದಲೂ ಭಕ್ತಾದಿಗಳು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
ಮಂಗಳವಾರದಂದು ದೇವಿಯ ಕಲ್ಯಾಣ ಮಹೋತ್ಸವವನ್ನು ವಿಜೃಂಭಣೆಯಿಂದ ನೆರೆವೇರಿಸಲಾಯಿತು. ನಂತರ ಬುಧವಾರ ದೇವಿಯ ರಥಾರೋಹಣ ನೆರವೇರಿಸಿ ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ನಗರದ ಹೃದಯ ಭಾಗದಲ್ಲಿರುವ ಬಿಡುಕಿ ಬೈಲಿನ ಗದ್ದುಗೆಗೆ ತರಲಾಯಿತು. ಭಕ್ತಾಧಿಗಳ ಭಕ್ತಿ ಘೋಷದೊಂದಿಗೆ ದೇವಿ ರಥದಲ್ಲಿ ಆಸೀನಳಾಗಿ ಇಡೀ ಭಕ್ತ ಸಮೂಹಕ್ಕೆ ದರ್ಶನ ತೋರಿದಳು.
ಪ್ರತಿ ಎರಡು ವರ್ಷಕ್ಕೊಮ್ಮೆ ಸರ್ವತ ಸುಭೀಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳೊಂದಿಗೆ ಶ್ರೀ ಮಾರಿಕಾಂಬಾ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ರಥೋತ್ಸವದ ವೇಳೆ ಸಾರ್ವಜನಿಕರು ಹಾರು ಕೋಳಿ ಬಿಡುವುದು ವಿಶೇಷ. ನಗರದ ಮುಖ್ಯ ರಸ್ತೆಯಲ್ಲಿ ರಥೋತ್ಸವದ ಮಮೆರವಣಿಗೆ ಅತಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.