ಬೆಂಗಳೂರು: ರಾಜಕಾರಣದಲ್ಲಿ ಯಾವ ಸಮಯಕ್ಕೆ ಏನ್ ಆಗುತ್ತೋ ಗೊತ್ತಿಲ್ಲ. ಯಾವಾಗ ಬೇಕಾದರೂ ರಾಜೀ ಆಗ್ತಾರೆ, ಯಾವಾಗ ಬೇಕಾದರೂ ಜಗಳ ಆಡ್ತಾರೆ. ಜೆಡಿಎಸ್ ನ ವರ್ತನೆಯೂ ಇದಕ್ಕೆ ಹೊರತಾಗಿಲ್ಲ. ಜಂಟಿ ಅಧಿವೇಶನ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದ್ದರೂ ವಿಪಕ್ಷ ಜೆಡಿಎಸ್ ಯಾಕೋ ಎರಡು ಮನೆಯಲ್ಲಿ ಮೌನಕ್ಕೆ ಶರಣಾಗಿದೆ. ಚರ್ಚೆಯಲ್ಲಿ ಆಸಕ್ತಿ ತೋರಿಸದೇ ಸರ್ಕಾರವನ್ನು ತರಾಟೆ ತೆಗೆದುಕೊಳ್ಳದೆ ಸೈಲೆಂಟ್ ಪಾಲಿಟಿಕ್ಸ್ ಮಾಡುತ್ತಿದೆ.
ಅಧಿವೇಶನಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ನಾಯಕ ಎಚ್ಡಿ ಕುಮಾರಸ್ವಾಮಿ ಮಂಗಳೂರು ಗೋಲಿಬಾರ್ ಪ್ರಕರಣ, ಮಂಗಳೂರು ಬಾಂಬ್ ಪ್ರಕರಣ ಪ್ರಸ್ತಾಪಕ್ಕೆ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಂಡಿದ್ರು. ಹೋದ ಬಂದ ಕಡೆ ಅಧಿವೇಶನದಲ್ಲಿ ಸರ್ಕಾರದ ಬಂಡವಾಳ ಬಿಚ್ಚಿಡುತ್ತೇನೆ ಅಂತ ಗುಡುಗಿದ್ರು. ಸಿ.ಡಿಗಳ ಮೇಲೆ ಸಿ.ಡಿ ಬಿಡುಗಡೆ ಮಾಡಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದರು. ಅದ್ಯಾಕೋ ಸದನದ ಒಳಗೆ ಕುಮಾರಸ್ವಾಮಿ ಫುಲ್ ಸೈಲೆಂಟ್ ಆಗಿದ್ದಾರೆ. ಮೂರು ದಿನಗಳಿಂದ ಸರ್ಕಾರದ ವಿರುದ್ಧ ಮಾತಾಡೋ ಗೋಜಿಗೆ ಹೋಗಿಲ್ಲ.
ಸದನದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಅಂತ ಚರ್ಚೆಗೆ ಅವಕಾಶ ಕೇಳಿದೆ. ಇಂದು ಮಧ್ಯಾಹ್ನ ಅವಕಾಶ ಕೋಡೋದಾಗಿ ಸ್ಪೀಕರ್ ಹೇಳಿದ್ದಾರೆ. ನಿನ್ನೆ ವಿಷಯ ಪ್ರಸ್ತಾಪದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಂದು ಕೂಡ ಸಿದ್ದರಾಮಯ್ಯ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷ ಯಾವುದೇ ನಾಯಕರು ಸರ್ಕಾರದ ವಿರುದ್ಧ ಮಾತಾಡುತ್ತಿಲ್ಲ. ಪ್ರಮುಖ ವಿಚಾರಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪ್ರಸ್ತಾಪ ಮಾಡಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡಲ್ಲೂ ಜೆಡಿಎಸ್ ಸೈಲೆಂಟ್ ಆಗಿದೆ. ಜೆಡಿಎಸ್ ಈ ನಡೆ ನೋಡಿದ್ರೆ ಯುದ್ಧದಿಂದ ಶಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ.