ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡೋದು ಯಾಕೆ?

Public TV
3 Min Read
Significance of Lakshmi Puja during Deepavali

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ… ಪುರಂದರ ದಾಸರ ರಚಿಸಿದ ಈ ಹಾಡು ಗುನುಗುತ್ತಲೇ ಇರುತ್ತದೆ. ಹಿಂದೂ (Hindu) ಧರ್ಮದಲ್ಲಿ ಸಂಪತ್ತು, ಅದೃಷ್ಟ, ಸಮೃದ್ಧಿ, ಸೌಂದರ್ಯ, ಫಲವತ್ತತೆ, ರಾಜಮನೆತನದ ಶಕ್ತಿ ಮತ್ತು ಸಮೃದ್ಧಿಯ ದೇವತೆ ಎಂದು ಪೂಜಿಸಲಾಗುತ್ತದೆ.

ದೇವ ದಾನವರು ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಮೊದಲು ತೀವ್ರವಾದ ವಿಷ ಜನಿಸಿತು. ನಂತರ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮೀ ಪಾಲ್ಗಡಲಿಂದ ಹೊರಬಂದಳು. ವಿಷ್ಣು ಲಕ್ಷ್ಮೀಯನ್ನು ಮದುವೆಯಾದ. ಎಲ್ಲಿ ಲಕ್ಷ್ಮೀ ನೆಲೆಸಿದ್ದಾಳೋ ಆ ಸ್ಥಳದಲ್ಲಿ ಎಂದಿಗೂ ಹಣ ಅಥವಾ ಆರ್ಥಿಕ ಸಮಸ್ಯೆ ಬರುವುದಿಲ್ಲ ಎಂಬ ನಂಬಿಕೆ. ಈ ಕಾರಣಕ್ಕಾಗಿ ಜನರು ಲಕ್ಷ್ಮೀ ದೇವಿಯನ್ನು ಮನೆಯ ದೇವರ ಕೋಣೆ, ಉದ್ಯೋಗ, ವ್ಯಾಪಾರ ಮಾಡುವ ಸ್ಥಳಗಳಲ್ಲಿ ಲಕ್ಷ್ಮೀಯ ಫೋಟೋವನ್ನು ಇರಿಸುತ್ತಾರೆ. ವ್ಯಾಪಾರಸ್ಥರು ಬೆಳಗ್ಗೆ ಲಕ್ಷ್ಮೀದೇವಿ ಕೈ ಮುಗಿದು ವ್ಯಾಪಾರ ಆರಂಭಿಸುತ್ತಾರೆ.

ದೀಪಾವಳಿ ಅಮಾವಾಸ್ಯೆಯನ್ನು ದೀವಳಿಗೆ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಆ ದಿನ ಕೆಲ ಕಡೆಗಳಲ್ಲಿ ಪಿತೃಗಳಿಗೆ ತರ್ಪಣವನ್ನಿತ್ತು ಶ್ರಾದ್ಧವಿಧಿಗಳನ್ನು ತೀರಿಸಿ ಜನರು ತಮ್ಮನ್ನು ಅಗಲಿದ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಬೇಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಆದರೆ ಲಕ್ಷ್ಮೀ ಕೇವಲ ‘ಧನಲಕ್ಷ್ಮೀ’ ಮಾತ್ರವಲ್ಲ. ಆಕೆ ಸಚ್ಚಿದಾನಂದ ಶಕ್ತಿಯ ವಿಶ್ವಮಯಿ. ಈಕೆಯೇ ಸಕಲ ಶ್ರೇಯಸ್ಸುಗಳಿಗೆ ಕಾರಣಳು. ಲಕ್ಷ್ಮೀ ಕಟಾಕ್ಷ ಜ್ಯೋತಿ ಸ್ವರೂಪಕ್ಕೆ ಸಮಾನ, ಮಹಾಲಕ್ಷ್ಮಿಯು ಜ್ಯೋತಿಸ್ವರೂಪಿಣಿಯಾಗಿದ್ದಾಳೆ. ಸೂರ್ಯ, ಚಂದ್ರ, ಅಗ್ನಿ, ನಕ್ಷತ್ರಗಳು ಮೊದಲಾದ ಎಲ್ಲಾ ಜ್ಯೋತಿರ್ವಸ್ತುಗಳಲ್ಲಿಯೂ ವಿರಾಜಮಾನಳಾಗಿದ್ದಾಳೆ. ಇದನ್ನೂ ಓದಿ: ವಯಸ್ಸಿನ ಅಂತರವಿಲ್ಲದೇ ಆಚರಿಸುವ ಹಬ್ಬ ದೀಪಾವಳಿ!

DEEPA

 

ಸರಸ್ವತಿ ಇದ್ದಲ್ಲಿ ಲಕ್ಷ್ಮೀ ಇರುತ್ತಾಳೆ. ಸರಸ್ವತಿ ಇಲ್ಲದ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲುವುದಿಲ್ಲ ಎಂಬ ಮಾತಿದೆ. ಈ ಕಾರಣಕ್ಕೆ ದಸರಾ ಸಮಯದಲ್ಲಿ ಸರಸ್ವತಿ ಪೂಜೆ ಮಾಡಿದರೆ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆ (Lakshmi Puja) ಮಾಡಿದರೆ ಆ ಮನೆಗೆ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿದೆ. ಲಕ್ಷ್ಮೀ ಎಷ್ಟು ಸಂತೋಷವಾಗಿರುತ್ತಾಳೆಯೋ ಅಷ್ಟು ಕುಟುಂಬಕ್ಕೆ ಆರೋಗ್ಯ ಮತ್ತು ಸಂಪತ್ತನ್ನು ಕರುಣಿಸುತ್ತಾಳೆ ಎಂದು ಭಕ್ತರು ನಂಬುತ್ತಾರೆ. ಅಸ್ಸಾಂ, ಒಡಿಶಾ ಮತ್ತು ಬಂಗಾಳದ ಕೆಲವು ಭಾಗಗಳಲ್ಲಿ ಲೋಕಿ ಪೂಜೆ ಅಥವಾ ಲಕ್ಷ್ಮೀ ಪೂಜೆಯನ್ನು ಅಶ್ವಿನಿ ಪೂರ್ಣಿಮಾ ದಿನದಂದು ವಿಜಯ ದಶಮಿಯ ನಂತರದ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ.

ಪುರಾಣ ಕಥೆ ಏನು?
ಋಷಿ ದೂರ್ವಾಸ ಮತ್ತು ದೇವೇಂದ್ರ ನಡುವಿನ ಸಭೆಯೊಂದಿಗೆ ಕಥೆಯು ಪ್ರಾರಂಭವಾಗುತ್ತದೆ. ಋಷಿ ದೂರ್ವಾಸ, ಬಹಳ ಗೌರವದಿಂದ ಇಂದ್ರನಿಗೆ ಹೂವಿನ ಹಾರವನ್ನು ಅರ್ಪಿಸುತ್ತಾನೆ. ಇಂದ್ರನು ಹೂವುಗಳನ್ನು ತೆಗೆದುಕೊಂಡು ತನ್ನ ಆನೆಯ ಐರಾವತದ ಹಣೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದುಕೊಂಡು ಭೂಮಿಯ ಮೇಲೆ ಎಸೆಯುತ್ತದೆ.

ನಾನು ನೀಡಿದ ಹಾರಕ್ಕೆ ಅಗೌರವ ತೋರಿದ್ದಕ್ಕೆ ಸಿಟ್ಟಾದ ದೂರ್ವಾಸ ಮುನಿ ಕೋಪಗೊಂಡು, ನಿನಗೆ ಅಹಂಕಾರ ಬಂದಿದೆ. ಹೇಗೆ ನನ್ನ ಹಾರವನ್ನು ನೆಲಕ್ಕೆ ಎಸೆದು ಹಾಳು ಮಾಡಿದೆಯೋ ಅದೇ ರೀತಿ ನಿನ್ನ ರಾಜ್ಯವು ಹಾಳಾಗಲಿ ಎಂದು ಇಂದ್ರನಿಗೆ ಶಾಪವನ್ನು ಕೊಡುತ್ತಾನೆ. ದೂರ್ವಾಸನ ಶಾಪದ ಪರಿಣಾಮ ದೇವತೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ತರಕಾರಿ ಉತ್ಪನ್ನಗಳು ಮತ್ತು ಸಸ್ಯಗಳು ಸಾಯಲು ಪ್ರಾರಂಭಿಸುತ್ತವೆ, ಪುರುಷರು ದಾನ ಮಾಡುವುದನ್ನು ನಿಲ್ಲಿಸುತ್ತಾರೆ, ಮನಸ್ಸುಗಳು ಭ್ರಷ್ಟವಾಗುತ್ತವೆ, ಜನರು ಅಂತಿಮ ಇಂದ್ರಿಯ ಸುಖಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಅಮರಾವತಿಯಲ್ಲಿ ದೇವರುಗಳು ದುರ್ಬಲವಾಗುತ್ತಿದ್ದಂತೆ, ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುತ್ತಾರೆ.

deepavali garuda 4

 

ಸೋತ ನಂತರ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ಮೊರೆ ಇಡುತ್ತಾರೆ. ಆಗ ಆಮೃತ ಪಡೆಯಬೇಕೆಂದು ಹೇಳಿದ ವಿಷ್ಣು ನೀವು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡಬೇಕು ಎಂದು ಸೂಚಿಸುತ್ತಾನೆ. ಸಮುದ್ರ ಮಥನದ ವೇಳೆ ಲಕ್ಷ್ಮೀ ದೇವಿಯು ಪೂರ್ಣ ಅರಳಿದ ಕಮಲದ ಮೇಲೆ ಕುಳಿತಿರುವ ಅಲೆಗಳಿಂದ ಹೊರಬರುತ್ತಾಳೆ. ನಂತರ ವಿಷ್ಣು ಲಕ್ಷ್ಮೀಯನ್ನು ವರಿಸುತ್ತಾನೆ.

ಈ ಕಥೆಯ ಸಾರಾಂಶ ಏನೆಂದರೆ ಅದೃಷ್ಟದ ದೇವತೆಯಾದ ಲಕ್ಷ್ಮಿಯು ಅಹಂಕಾರಿಗಳಾದರೆ ದೇವತೆಗಳನ್ನೂ ಸಹ ಕೈಬಿಡುತ್ತಾಳೆ. ಹೀಗಾಗಿ ಸಿರಿವಂತಿಕೆ ಬಂದರೂ ಅಂಹಕಾರ ತೋರದೇ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ನೆಲಸುತ್ತಾಳೆ ಎಂಬ ನಂಬಿಕೆ ಈಗಲೂ ಇದೆ.

Share This Article