ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ.
ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.
ಆಯುಧ ಪೂಜೆಯ ಇತಿಹಾಸ:
ದುರ್ಗಾ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು. ಆ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜಿಸಲಾಯಿತು. ಹಾಗಾಗಿಯೇ ನವರಾತ್ರಿಯ ನವಮಿಯ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎಂಬ ಕಥೆಯಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!
ಆಯುಧ ಪೂಜೆಯ ಹಿಂದೆ ಮತ್ತೊಂದು ಪೌರಾಣಿಕ ಮಹತ್ವವೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?
ವಿಜಯದಶಮಿ ಹಬ್ಬದ ದ್ಯೋತಕವಾಗಿ ಮನೆಮನೆಗಳಲ್ಲಿ ನೆಂಟರಿಷ್ಟರು ಬನ್ನಿ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂತಸಪಡುತ್ತಾರೆ. ಈ ಬನ್ನಿ ಬಂಗಾರಕ್ಕೆ ಸಮಾನವೆಂದು ಹಿಂದೂಗಳಲ್ಲಿ ನಂಬಿಕೆಯಿದೆ. ಬನ್ನಿ ತೆಗೆದುಕೊಂಡು ಬಂಗಾರದಂತಿರೋಣ ಎಂದು ಆಶಿಸುತ್ತಾರೆ. ಕಿರಿಯರು ಬನ್ನಿ ಸೊಪ್ಪನ್ನು ಹಿರಿಯರ ಕೈಗಿತ್ತು ಆಶೀರ್ವದಿಸಿ ಎಂದು ನಮಸ್ಕರಿಸುವುದು ವಿಜಯದಶಮಿಯ ಸಂಪ್ರದಾಯಗಳಲ್ಲಿ ಮುಖ್ಯವಾದುದು. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿದ್ದ ಕಲ್ಮಶಗಳೆಲ್ಲ ತೊಳೆದು ಬಾಳು ಬಂಗಾರವಾಗಲಿ ಎಂಬುದು ಈ ಆಚರಣೆಯ ಆಶಯವಾಗಿದೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ
ಪೂಜೆ ಹೇಗಿರಬೇಕು? ಅದಕ್ಕೆ ಅಗತ್ಯತೆಗಳು ಏನೇನು?
1. ಮೊದಲು ನೀವು ಪೂಜೆ ಮಾಡುವ ಜಾಗವನ್ನು ಆಯ್ದುಕೊಳ್ಳಿ. ನಂತರ ಆಯುಧಗಳನ್ನು ಇಡಿ. ಅವುಗಳನ್ನು ಅಲ್ಲಿ ಪದೇ ಪದೇ ತೆಗೆದು ಜಾಗ ಬದಲಿಸಬಾರದು.
2. ನೀವು ಪೂಜೆ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ದಿನನಿತ್ಯದ ಬಳಕೆಯ ವಸ್ತುವೂ ಆಗಿರಬಹುದು. ಸಂಗೀತಗಾರ ತನ್ನ ಸಂಗೀತ ವಾದ್ಯಗಳನ್ನು, ವಿದ್ಯಾರ್ಥಿಗಳು ತಮ್ಮ ಪಟ್ಟಿ-ಪುಸ್ತಕ ಮತ್ತು ಲೇಖನಿಯನ್ನು ಹೀಗೆ ನಿಮಗೆ ಅನುಕೂಲ ತಂದುಕೊಡುತ್ತಿರುವ ವಸ್ತುಗಳನ್ನು ಪೂಜಿಸಬಹುದು.
3. ಪೂಜೆಗೆ ಆಯ್ಕೆ ಮಾಡಿಕೊಂಡ ವಸ್ತುಗಳನ್ನು ಪೂಜಿಸುವ ಮೊದಲು ಸ್ವಚ್ಛಗೊಳಿಸಿ ಇಡಲು ಮರೆಯಬಾರದು.