ನವದೆಹಲಿ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಕಾಂಗ್ರೆಸ್ ನಾಯಕ ಹಾಗೂ ಖ್ಯಾತ ಗಾಯಕ ಸಿದ್ದು ಮೂಸೆವಾಲಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಬಿಜೆಪಿ ನಾಯಕ ಜಗಜಿತ್ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಗಳ ಅಡಿಯಲ್ಲಿ ದಾಖಲಾಗಿರುವ ಮೇ 29 ರ ಪ್ರಥಮ ಮಾಹಿತಿ ವರದಿಯನ್ನು(ಎಫ್ಐಆರ್) ಸಿಬಿಐಗೆ ವರ್ಗಾಯಿಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ
ಹಗಲು ಹೊತ್ತಿನಲ್ಲಿ ಕೋಲ್ಡ್ ಬ್ಲೆಡ್ ಹತ್ಯೆಯನ್ನು ನಡೆಸಿದ ರೀತಿ, ಪಂಜಾಬ್ ರಾಜ್ಯದ ಆಡಳಿತ ಯಂತ್ರವು ಅಪರಾಧವನ್ನು ತಡೆಗಟ್ಟುವಲ್ಲಿ ಮಾತ್ರವಲ್ಲದೆ ದರೋಡೆಕೋರರ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ಕರ್ತವ್ಯದಲ್ಲೂ ವಿಫಲವಾಗಿದೆ ಎಂಬ ಅಂಶವನ್ನು ಸೂಚಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾನ್ಪುರದಲ್ಲಿ ಘರ್ಷಣೆ – ಸಾವಿರ ಮಂದಿ ಮೇಲೆ ಎಫ್ಐಆರ್, 18 ಮಂದಿ ಅರೆಸ್ಟ್
ಗಾಯಕ ಮೂಸೆವಾಲಾ ಕಳೆದ ವಾರ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯಲ್ಲಿ ಭಾಗಿಯಾಗಿದ್ದು, ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಈ ಕೊಲೆಯನ್ನು ನಾವೇ ಎಸಗಿದ್ದಾನೆ ಎಂದು ಹೇಳಿದ್ದಾನೆ.
ಹತ್ಯೆಗೂ ಒಂದು ದಿನದ ಮೊದಲು ಪಂಜಾಬ್ ಸರ್ಕಾರ ಮೂಸೆವಾಲಾ ಭದ್ರತೆಯನ್ನು ಹೇಗೆ ತೆಗೆದುಹಾಕಿತ್ತು ಮತ್ತು ಅದರ ಬಗ್ಗೆ ಮಾಧ್ಯಮಗಳಲ್ಲಿ ಹೇಗೆ ಮಾಹಿತಿ ಪ್ರಕಟವಾಯಿತು ಎಂಬುದನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಿ ಹೇಳಲಾಗಿದೆ.
ಪ್ರಕರಣದ ಓರ್ವ ಆರೋಪಿ ಮನ್ಪ್ರೀತ್ ಸಿಂಗ್ನನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಆದರೆ ಇತರ ಸಹ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.