ಚಿಕ್ಕೋಡಿ: ಕೊಡಗು ನೆರೆ ಸಂತ್ರಸ್ತರಿಗಾಗಿ ಸ್ವಾಮೀಜಿಗಳು ಸ್ವತಃ ಬೀದಿಗೆ ಇಳಿದು ಹೆಗಲಿಗೆ ಜೋಳಿಗೆ ಹಾಕಿ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಕೇವಲ ಒಂದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ.
ಅಡವಿ ಸಿದ್ದೇಶ್ವರ ಮಠದಿಂದ ಇಂದು ನಿಧಿ ಸಂಗ್ರಹ ಪಾದಯಾತ್ರೆ ಹುಕ್ಕೇರಿಯಲ್ಲಿ ಪ್ರಾರಂಭವಾಗಿದ್ದು, ಬುಧವಾರ ಸಹ ಮುಂದುವರಿಯಲಿದೆ. ನಾಳೆ ಸಾಯಂಕಾಲ ಸಂಕೇಶ್ವರ ಪಟ್ಟಣದಲ್ಲಿ ಸ್ವಾಮೀಜಿಗಳು ಜೋಳಿಗೆ ಹಾಕಿ ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದು ಸ್ವಾಮೀಜಿಗಳು ಸೇರಿಸುವ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಗಿನ ಜನತೆಗೆ ನೀಡಲಿದ್ದಾರೆ.
ಈ ವೇಳೆ ಮಾತನಾಡಿದ ಶಿವಲಿಂಗೇಶ್ವರ ಸ್ವಾಮೀಜಿಗಳು ಮತ್ತು ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿಗಳು ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ, ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದರು. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv