-ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರೋದು ಬೇಡ
ವಿಜಯಪುರ: ಆಪರೇಷನ್ ಕಮಲ ಅಂದರೆ ಕುರಿ, ದನ, ಎಮ್ಮೆಗಳನ್ನು ದುಡ್ಡು ಕೊಟ್ಟು ಖರೀದಿಸಿದಂತೆ. ಯಾವ ಶಾಸಕರು ಮಾರಾಟಕ್ಕೆ ಇರುತ್ತಾರೆ ಅವರನ್ನು ಖರೀದಿಸಿ ಮುಂದಿನ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಾಲೆಳೆದ್ದಿದ್ದಾರೆ.
ಆಲಮಟ್ಟಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಬಿ.ಎಸ್.ಯಡಿಯೂರಪ್ಪ 20 ರಿಂದ 25 ಕೋಟಿ ರೂ. ನೀಡಿ ಶಾಸಕರನ್ನು ಖರೀದಿಸಿ, ಸರ್ಕಾರ ರಚಿಸಲು ಮುಂದಾಗಿದ್ದರು. ಹೀಗಾಗಿ ಮೊದಲ ಅನೈತಿಕ ರಾಜಕಾರಣ ಮಾಡಿದ್ದು ಅವರೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅನೇಕ ಮುಖಂಡರು ಕಾಂಗ್ರೆಸ್ಸಿಗೆ ಬರುವುತ್ತೇವೆ ಎಂದು ಕೇಳುತ್ತಿದ್ದಾರೆ. ಆದರೆ ಅವರು ಬರುವುದು ಬೇಡ ಅಂತಾ ಅವರಿಗೆ ಅಲ್ಲೆ ಇರುವಂತೆ ನಾವೇ ಹೇಳಿದ್ದೇವೆ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದ ಅವರು, ರಾಜ್ಯದ ಜನರು ಸಮ್ಮಿಶ್ರ ಸರ್ಕಾರ ರಚನೆಯಾಗಲಿ ಅಂತಾ ಜನರು ಮತ ಹಾಕಿದ್ದಾರೆ. ಅದರಂತೆ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ ಎಂದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಪ್ರತ್ಯೇಕ ಮಾಡುವುದು ಸರಿಯಲ್ಲ. ರಾಜ್ಯವನ್ನು ನಾನು ಅಖಂಡ ಕರ್ನಾಟಕವಾಗಿ ನೋಡಲು ಬಯಸುತ್ತೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿ ನಡೆಸುವ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರತ್ಯೇಕ ರಾಜ್ಯ ಬೇಡಿಕೆಗೆ ನನ್ನ ವಿರೋಧವಿದೆ ಎಂದು ಹೇಳಿದರು.