ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಇವತ್ತು ಭರ್ತಿಯಾಗಲಿದೆ. ಇಬ್ಬರು ಪರಿಷತ್ ಸದ್ಯಸ್ಯರು, ಶಾಸಕಿ ಸೇರಿ ಒಟ್ಟು ಮೂವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಜೆ 5 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಶಾಸಕಿ ಗೀತಾ ಮಹದೇವಪ್ರಸಾದ್, ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರಾದ ವಜುಭಾಯ್ ವಾಲಾ ಪ್ರಮಾಣವಚನ ಬೋಧಿಸಲಿದ್ದು, ಸಿಎಂ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ.
ಮೂವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ರೆ ಸಿದ್ದರಾಮಯ್ಯ ಸಂಪುಟ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲಿದ್ದು, ಸಿಎಂ ಸೇರಿ ಒಟ್ಟು 34 ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಟೀಂ ಆಗಲಿದೆ.
ಇವತ್ತೇ ಖಾತೆ ಹಂಚಿಕೆಯಾಗಲಿದ್ದು, ಗೀತಾ ಮಹದೇವಪ್ರಸಾದ್ ಗೆ ಸಹಕಾರ ಖಾತೆ ಹೆಚ್.ಎಂ.ರೇವಣ್ಣಗೆ ಅರಣ್ಯ ಖಾತೆ, ಆರ್.ಬಿ.ತಿಮ್ಮಾಪುರಗೆ ಅಬಕಾರಿ ಹಾಗೂ ರಮಾನಾಥ್ ರೈಗೆ ಗೃಹ ಖಾತೆ ವಹಿಸಲಿದ್ದಾರೆ.
ಇವರಿಗೇ ಏಕೆ ಸಚಿವ ಸ್ಥಾನ?
1. ಆರ್.ಬಿ ತಿಮ್ಮಾಪುರ
* ಹಿರಿಯ ವಿಧಾನಪರಿಷತ್ ಸದಸ್ಯ.
* ಉತ್ತರ ಕರ್ನಾಟಕ ಭಾಗದ ದಲಿತ ಸಮುದಾಯದ ಹಿರಿಯ ನಾಯಕ.
* ಪಿಎಂ ನರೇಂದ್ರಸ್ವಾಮಿ ಪರ ಸಿಎಂ ಒಲವಿದ್ದರೂ ಜಾತಿ ಲೆಕ್ಕಾಚಾರದಲ್ಲಿ ತಿಮ್ಮಾಪುರರಿಗೆ ಸ್ಥಾನ.
* ಮೋಟಮ್ಮ ಪರ ಪರಮೇಶ್ವರ್ಗೆ ಒಲವು. ಆದ್ರೆ ಮುಖ್ಯಮಂತ್ರಿಗಳಿಗಿಲ್ಲದ ಒಲವು.
* ದಲಿತರಲ್ಲಿ ಎಡಗೈ ಸಮುದಾಯದವರಿಗೆ ಕಾಂಗ್ರೆಸ್ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂಬ ಆರೋಪ ಹೋಗಲಾಡಿಸಲು ಸಚಿವ ಸ್ಥಾನ.
* ದಲಿತ ಬಲಗೈ ಪಂಗಡಕ್ಕೆ ಸೇರಿದ ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಸ್ಥಾನ ತೆರವಾಗಿದ್ದರೂ ಆರ್.ಬಿ ತಿಮ್ಮಾಪುರ ಅವರಿಗೆ ಸ್ಥಾನ ಲಭಿಸಲು ಖರ್ಗೆ ಬೆಂಬಲ.
2. ಎಚ್.ಎಂ ರೇವಣ್ಣ
* ಕುರುಬ ಸಮುದಾಯದ ಸಂಘಟನೆಯಲ್ಲಿ ಹೆಚ್ಚಿನ ಪಾತ್ರ.
* ಎಚ್.ವೈ ಮೇಟಿಯಿಂದ ತೆರವಾದ ಸ್ಥಾನಕ್ಕೆ ಅದೇ ಸಮುದಾಯದವರಾದ ಎಚ್.ಎಂ ರೇವಣ್ಣರಿಗೆ ಸ್ಥಾನ.
* ಎಚ್ ವಿಶ್ವನಾಥ್ ಪಕ್ಷ ತೊರೆದ ಮೇಲೆ ಸ್ವಸಮುದಾಯದವರಿಗೆ ಸಚಿವ ಸ್ಥಾನ ನೀಡದಿದ್ದರೆ ವಿರೋಧದ ಭೀತಿ.
3. ಗೀತಾ ಮಹದೇವಪ್ರಸಾದ್
* ಮೊದಲ ಬಾರಿಗೆ ಶಾಸಕರಾಗಿರುವ ಗೀತಾ ಮಹದೇವಪ್ರಸಾದ್ಗೆ ಮಂತ್ರಿ ಭಾಗ್ಯ.
* ಮಹದೇವಪ್ರಸಾದ್ರಿಂದ ತೆರವಾಗಿದ್ದ ಸ್ಥಾನಕ್ಕೆ ಲಿಂಗಾಯತ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಡ.
* ಹಳೇ ಮೈಸೂರು ಭಾಗದ ಲಿಂಗಾಯತ ಸಮುದಾಯದ ಷಡಕ್ಷರಿಗೆ ಸಚಿವ ಸ್ಥಾನ ನೀಡಿದ್ರೆ ಆರೋಪ ಹೊರಬೀಳುವ ಬಗ್ಗೆ ಆಂತರಿಕ ಮಾಹಿತಿ ಹಿನ್ನೆಲೆಯಲ್ಲಿ ಗೀತಾ ಮಹದೇವಪ್ರಸಾದ್ಗೆ ಸ್ಥಾನ.
* ಚುನಾವಣೆ ದೃಷ್ಠಿಯಿಂದ ಹಳೆ ಮೈಸೂರು ಭಾಗದ ಲಿಂಗಾಯತ ಮತ ಸೆಳೆಯಲು ಮಾಸ್ಟರ್ ಪ್ಲಾನ್.