ಕೋಲಾರ: ಬಿಜೆಪಿಯವರು ಪುಲ್ವಾಮಾ ಮತ್ತು ಏರ್ಸ್ಟ್ರೈಕ್ ಮೂಲಕ ಜನರ ಮನಸನ್ನು ಡೈವರ್ಟ್ ಮಾಡಿದ್ದಾರೆ. ಆಶ್ಚರ್ಯ ಏನಪ್ಪ ಅಂದ್ರೆ ಸಿದ್ದರಾಮಯ್ಯ ಕೊಟ್ಟ ಅನ್ನಭಾಗ್ಯದ ಅನ್ನ ಊಟ ಮಾಡಿ, ಪ್ರಧಾನಿ ನರೇಂದ್ರ ಮೋದಿಗೆ ವೋಟ್ ಹಾಕಿದರು ಎಂತಾ ದುರ್ದೈವ ನೋಡಿ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹರಿಹಾಯ್ದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಿಸಿದಂತಹವರು ಬಿಜೆಪಿ ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ನೋವು ನನಗಿದೆ. ಅಲ್ಲದೆ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಅಕ್ಕಿ ತಿಂದು ಮೋದಿಗೆ ವೋಟ್ ಹಾಕಿದ್ದಾರೆ. ಅವರು ಇದುವರೆಗೂ ಒಬ್ಬ ಯುವಕನಿಗೆ ಉದ್ಯೋಗ ಕೊಡಿಸಿಲ್ಲ. ಪುಲ್ವಾಮಾ ಹಾಗೂ ಏರ್ಸ್ಟ್ರೈಕ್ ತಂತ್ರಗಾರಿಕೆಯಿಂದ ಮೋದಿ ಜನರನ್ನ ಮೋಡಿ ಮಾಡಿ ಗೆದ್ದಿದ್ದಾರೆ ಎಂದು ಕಿಡಿಕಾರಿದರು.
ನಾನು ಮಂತ್ರಿಯಾಗಿದ್ದಾಗ ಕೈಗಾರಿಕಾ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೆ.ಸಿ.ವ್ಯಾಲಿ ಯೋಜನೆಗೆ ಶ್ರಮಿಸಿದ್ದೇನೆ. ಇನ್ನೂ ನಾನು ಗೆಲ್ಲಸಿದ ನನ್ನ ಹಿತೈಷಿಗಳೇ, ಪಕ್ಷದ ಶಾಸಕರೇ ನನ್ನ ಸೋಲಿಗೆ ಕಾರಣವಾದರು. ಹೈಕಮಾಂಡ್ನಲ್ಲಿ ನಿರ್ಧಾರವಾಗಿದೆ. ಸರ್ಕಾರ ಸುಭದ್ರವಾಗಿರಬೇಕು ಎನ್ನುವ ಕಾರಣಕ್ಕೆ ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಕೆ.ಸಿ.ಯೋಜನೆಯ ಜನಕರೇ ಬೇರೆ, ಲಾಲಿ ಹಾಡಿದವರೇ ಬೇರೆ. ಈ ಕಥೆಯನ್ನ ಸಂಪೂರ್ಣವಾಗಿ ಬಿಚ್ಚಿಡುವೆ ಕಾಯಬೇಕು ಎಂದು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಣದ ಕೈಗಳು ಜನರನ್ನ ಮೋಸ ಮಾಡಿದ್ದಾರೆ, ಯಾರು ಯಾರು ಎನ್ನುವುದನ್ನ ಜನರ ಬಳಿ ಬಿಚ್ಚಿಡುವೆ. ಮಹಾನಗರ ಪಾಲಿಕೆಗಳಲ್ಲಿ ಫ್ರೆಂಡ್ಲಿ ಆಗಿ ಫೈಟ್ ಮಾಡಿದ ರೀತಿ, ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದರೆ 10 ರಿಂದ 15 ಸ್ಥಾನಗಳು ಕಾಂಗ್ರೆಸ್ಸಿಗೆ ಬರುತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾಯಕರು ಒಂದಾದರೂ ಕಾರ್ಯಕರ್ತರು ಒಂದಾಗಲಿಲ್ಲ. ಇದರಿಂದ ದೇವೇಗೌಡರು ಸಹ ಸೋಲಬೇಕಾಯಿತು. ಈಗಾಗಲೇ ಮೂರ್ಖರಾಗಿದ್ದೇವೆ ಮುಂದೆ ಈ ರೀತಿ ದಡ್ಡರಾಗುವುದಿಲ್ಲ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡಲಿದ್ದೇವೆ ಎಂದು ತಿಳಿಸಿದರು.