ರಾಯಚೂರು: ಸಮಾಜದಲ್ಲಿ ಜಾತಿ, ಭಾಷೆ ವಿಷ ಬೀಜ ಬಿತ್ತಿ ಬ್ರಿಟಿಷರು ದೇಶವನ್ನು ಆಳಿದ್ದರು. ಕಾಂಗ್ರೆಸ್ ಅವರು ಯಾವಾಗ ಸೋಲುತ್ತೇವೆ ಅಂತ ಗೊತ್ತಾಗುತ್ತೋ, ಮುಗಿತು ನಮ್ಮ ಕಾಲ ಅಂತ ಜಾತಿ ಬಗ್ಗೆ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.
ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ಕೊಟ್ಟ ಅವರು, ಸಿದ್ದರಾಮಯ್ಯ ಅವರಿಗೆ 74 ವರ್ಷ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ. ಹಿಂದೂ ಸಮಾಜ ಒಂದಾಗಿದೆ ಅಂದಾಗ ಕಾಂಗ್ರೆಸ್ ಜಾತಿ ಮಾತು ಆಡೋದು ಹೊಸತೇನಲ್ಲ. ದ್ರಾವಿಡ, ಆರ್ಯ ಅಂತ ಯಾವುದೇ ಸಿದ್ಧಾಂತಗಳಿಲ್ಲ, ಡಿಎನ್ಎ ಟೆಸ್ಟ್ ಆಗಿದೆ. ಎಲ್ಲವೂ ಒಂದೇ ಅಂತ ವಿಜ್ಞಾನ ಸಾಬೀತು ಮಾಡಿದೆ. ಹೀಗಿದ್ರೂ ಕಾಂಗ್ರೆಸ್ ಈ ಬಗ್ಗೆ ಮಾತನಾಡ್ತಿದೆ. ಇದನ್ನೆಲ್ಲಾ ನೋಡಿದ್ರೆ ಕಾಂಗ್ರೆಸ್ ಬೇರೆ ಏನೋ ಉದ್ದೇಶ ಇಟ್ಟುಕೊಂಡು ಮಾತನಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ
ರಾಜ್ಯದಲ್ಲಿ ಹಿಜಬ್ ವಿವಾದ ಎರಡು ಕಾರಣಗಳಿಗೆ ಮತ್ತೆ ಚರ್ಚೆಗೆ ಬಂದಿರುವ ಅವಕಾಶಗಳಿವೆ. ಒಂದು ಹಿಂದೂ ಸಮಾಜವನ್ನು ಒಡೆಯುವುದು ಇನ್ನೊಂದು ಮುಸ್ಲಿಂ ಸಮುದಾಯವನ್ನು ವೋಟು ಬ್ಯಾಂಕ್ ಮಾಡಿಕೊಳ್ಳುವುದು. ಇದು ಒಂದಷ್ಟು ರಾಜಕೀಯ ಪಕ್ಷಗಳ ಕೆಲಸವಾಗಿ ಬಿಟ್ಟಿದೆ. ಎಲ್ಲ ಮಕ್ಕಳು ಸಮವಸ್ತ್ರ ನಿಯಮ ಪಾಲಿಸಬೇಕು. ನಿಯಮ ಪಾಲಿಸಲು ಹಿಂದೇಟು ಹಾಕುವುದು ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತೆ ಎಂದು ಹೇಳಿದರು.
ಗುಣಮಟ್ಟ ಶಿಕ್ಷಣಕ್ಕೆ ನಮ್ಮ ಸರ್ಕಾರ ಮಹತ್ವ ನೀಡುತ್ತಿದೆ. ಶಾಲೆ ಆರಂಭದಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 15 ಸಾವಿರ ರೂ. ಶಿಕ್ಷಕರ ನೇಮಕಾತಿ ಪ್ರಗತಿಯಲ್ಲಿದೆ. ರಾಜ್ಯದ 87 ತಾಲೂಕುಗಳನ್ನು ಸ್ಪೆಷಲ್ ಎಜುಕೇಷನ್ ಜೋನ್ ಎಂದು ಗುರುತಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ ಅದನ್ನು ಸರಿಪಡಿಸಲು ನಾವು ಮುಂದಾಗಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಅಪೌಷ್ಟಿಕತೆ ದೂರ ಮಾಡಲು ಶಾಲೆಯಲ್ಲಿ ಬಾಳೆಹಣ್ಣು ಮತ್ತು ಮೊಟ್ಟೆ ನೀಡುತ್ತಿದ್ದೇವೆ. ಈ ವರ್ಷದಿಂದ ಕಡಲೆಕಾಯಿ ಮಿಠಾಯಿ ನೀಡಲು ಚಿಂತನೆ ನಡೆಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದು ವಿವರಿಸಿದರು. ಇದನ್ನೂ ಓದಿ: ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್