ಬಾಗಲಕೋಟೆ: ಲೋಕಸಭಾ ಚುನಾವಣೆಯಾದ ನಾಲ್ಕೈದು ತಿಂಗಳೊಳಗೆ ಸಿದ್ದರಾಮಯ್ಯ ಸಿಎಂ ನೂರಕ್ಕೆ ನೂರಷ್ಟು ಮತ್ತೆ ರಾಜ್ಯದ ಸಿಎಂ ಆಗುತ್ತಾರೆ ಎಂದು ಬಸವಕಲ್ಯಾಣ ಶಾಸಕ ಬಿ ನಾರಾಯಣ್ ರಾವ್ ಭವಿಷ್ಯ ನುಡಿದಿದ್ದಾರೆ.
ಬಾದಾಮಿಯಲ್ಲಿ ನಡೆದ ಜಿಲ್ಲಾಮಟ್ಟದ ಗಂಗಾಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ನಾರಾಯಣ್ ರಾವ್, ಲೋಕಸಭಾ ಚುನಾವಣೆ ಬಳಿಕ ಅಂದರೆ 2019ರಲ್ಲೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದರು.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಮರ್ಥ ನಾಯಕ, ಇಂತಹ ನಾಯಕ ನಮಗೆ ಸಿಕ್ಕಿದ್ದಾರೆ. ನನ್ನನ್ನು ಗುರುತಿಸಿ ಬಸವಕಲ್ಯಾಣದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದು ಸಿದ್ಧರಾಮಯ್ಯ ಅವರು. ಆಗ ಇಡೀ ಹಾಲುಮತ ಸಮಾಜ ಟೊಂಕಕಟ್ಟಿ ಮುಂದೆ ನಿಂತು ನನ್ನನ್ನು 18 ಸಾವಿರ ಮತದಿಂದ ಗೆಲ್ಲಿಸಿದೆ. ನಾವು ಸಿದ್ದರಾಮಯ್ಯಗೆ ಎಲ್ಲ ರೀತಿ ಶಕ್ತಿ ಕೊಡಬೇಕು ಎಂದರು.
ಈ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಳಿಕ ಸಿದ್ದರಾಮಯ್ಯ ಅವರು ಅಲ್ಲಿಂದ ತೆರಳಿದ್ದರು. ಆ ಬಳಿಕ ಮಾತನಾಡಿದ ಆಪ್ತ ಶಾಸಕ ನಾರಾಯಣ್ ರಾವ್ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಸವಕಲ್ಯಾಣ ಶಾಸಕರಾಗಿರುವ ನಾರಾಯಣ್ ರಾವ್ ಅವರು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಕೂಡ ಆಗಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಒಪ್ಪಂದದ ಪ್ರಕಾರ ಕುಮಾರಸ್ವಾಮಿ ಅವರೇ 5 ವರ್ಷಗಳ ಸಿಎಂ. ಆದರೆ ನಮ್ಮ ಶ್ರೀಗಳ ಆಶೀರ್ವಾದ, ನಿಮ್ಮ ಆಶೀರ್ವಾದ ಸಿದ್ದರಾಮಯ್ಯ ಅವರ ಮೇಲಿರಲಿ ಎಂದು ಸಮುದಾಯದ ಜನರಿಗೆ ಮನವಿ ಮಾಡಿ ಶಾಸಕ ನಾರಾಯಣ್ ರಾವ್ ಅವರ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದು ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv