ಬೆಂಗಳೂರು: ಪಕ್ಷದೊಳಗಿನ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ತಂತ್ರಗಾರಿಕೆಗೆ ಮುಂದಾದ್ರಾ ಅನ್ನೋ ಪ್ರಶ್ನೆಯೊಂದು ಎದ್ದಿದೆ. ಪಕ್ಷದೊಳಗಿನ ವಿರೋಧಿಗಳನ್ನೆಲ್ಲ ಒಂದೇ ವೇದಿಕೆಗೆ ತರಲು ಹೊಸ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪಕ್ಷದ ಹಿರಿಯ ನಾಯಕರ ನಿವಾಸಕ್ಕೆ ಭೇಟಿ ನೀಡಿ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮಾಜಿ ಸಿಎಂ ಮುಂದಾಗಿದ್ದಾರೆ. ಅದಕ್ಕೂ ಮೊದಲು ಎಲ್ಲಾ ಹಿರಿಯ ನಾಯಕರ ಜೊತೆ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.
ಮೂಲ ಕಾಂಗ್ರೆಸ್ಸಿಗರು ಹಾಗೂ ಹಿರಿಯ ನಾಯಕರ ಜೊತೆ ಸೋಮವಾರ ಸಭೆ ನಡೆಸಲು ಮುಂದಾಗಿದ್ದಾರೆ. ಸಾಧ್ಯವಾದರೆ ಸೋಮವಾರದ ಸಭೆ ಬದಲಿಗೆ ಹಿರಿಯ ನಾಯಕರ ಜೊತೆಗೆ ಸೌಹಾರ್ದ ಕೂಟ ನಡೆಸಲು ಸಿದ್ದರಾಮಯ್ಯ ಪ್ಲಾನ್ ಮಾಡುತ್ತಿದ್ದಾರೆ. ಹಿರಿಯ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟರೆ ಹಿರಿಯ ಅವರ ಜೊತೆ ಸೌಹಾರ್ದ ಬೋಜನ ಕೂಟ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಒಂದು ವೇಳೆ ಹಿರಿಯ ನಾಯಕರ ಸಮ್ಮತಿ ಸಿಗದಿದ್ದರೆ, ಸಿಎಲ್ ಪಿ(ಕಾಂಗ್ರೆಸ್ ಶಾಸಕಾಂಗ ಪಕ್ಷ)ದ ನಾಯಕನಾಗಿ ಸೋಮವಾರ ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಉಪ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಆ ನಂತರ ಹಂತ ಹಂತವಾಗಿ ಹಿರಿಯ ನಾಯಕರ ನಿವಾಸಕ್ಕೆ ಭೇಟಿಕೊಟ್ಟು ಮಾತುಕತೆ ನಡೆಸಲಿದ್ದಾರೆ. ಹೀಗೆ ವಿಪಕ್ಷ ನಾಯಕನಾಗಿ ನೇಮಕವಾದ ಕಾರಣಕ್ಕೆ ಉಪ ಚುನಾವಣೆಯ ಗೆಲುವಿನ ಜವಾಬ್ದಾರಿ ಸಿದ್ದರಾಮಯ್ಯ ಹೆಗಲೇರಿದೆ. ಆದ್ದರಿಂದ ಮೂಲ ಕಾಂಗ್ರೆಸ್ಸಿಗರ ವಿಶ್ವಾಸ ಗಳಿಸಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.