ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 13ನೇ ಬಜೆಟ್ ಮಂಡಿಸಲಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ 13ನೇ ಬಾರಿ ಹಾಗೂ ಮುಖ್ಯಮಂತ್ರಿಯಾದ ಬಳಿಕ 6ನೇ ಬಜೆಟ್ ಮಂಡಿಸುತ್ತಿದ್ದು, 13 ಬಾರಿ ದಾಖಲೆ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸಮ ಮಾಡಲಿದ್ದಾರೆ.
ಸಾಲದ ಹೊರೆ, ಲೇಖಾನುಧಾನಕ್ಕೆ ಪ್ರತಿಪಕ್ಷಗಳ ಆಗ್ರಹದ ನಡುವೆಯೇ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಯುವ ಸಮೂಹ, ರೈತರ ಸಬಲೀಕರಣವನ್ನ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ವರ್ಗಗಳನ್ನು ತೃಪ್ತಿಪಡಿಸುವ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಾಗಿದೆ. ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡುವುದು, ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತಂದು ಬಂಪರ್ ಕೊಡುಗೆ ನೀಡಲಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ 11.30ಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ಚುನಾವಣೆಗೆ ಇನ್ನೆರಡು ತಿಂಗಳು ಇರುವಾಗ ಮಂಡಿಸುತ್ತಿರುವ ಬಜೆಟ್ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಏನಿರಬಹುದು..?
* ರೈತರ ಸಂಪೂರ್ಣ ಸಾಲ ಮನ್ನಾ (2571 ಕೋಟಿ)
* ಸರ್ಕಾರಿ ನೌಕರರ ವೇತನ ಹೆಚ್ಚಳ (6ನೇ ವೇತನ ಆಯೋಗದ ಶಿಫಾರಸು)
* ಆರೋಗ್ಯ ಭಾಗ್ಯಕ್ಕೆ ಹೆಚ್ಚಿನ ಒತ್ತು
* ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮ
* ಪಟ್ಟಣಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ
* ಮಹಿಳೆಯರು, ವೃದ್ಧರು, ಅಂಗವಿಕಲರ ಮಾಶಾಸನ ದುಪ್ಪಟ್ಟು
* ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್
* ಬಗರ್ಹುಕುಂ ಯೋಜನೆಯ ಅನುಷ್ಠಾನ
* ಉದ್ಯೋಗ ಸೃಷ್ಟಿಯ ಘೋಷಣೆ (ಶಿಕ್ಷಕರ ನೇಮಕ)
* ಬೆಂಗಳೂರಿಗೆ 17 ಸಾವಿರ ಕೋಟಿಗಿಂತಲೂ ಹೆಚ್ಚಿನ ಅನುದಾನ