ಉಡುಪಿ: ಆರ್ಎಸ್ಎಸ್ ಚಡ್ಡಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಯಭೀತರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಆರ್ಎಸ್ಎಸ್ನ ಚಡ್ಡಿ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಆರ್ಎಸ್ಎಸ್ನ ಚಡ್ಡಿ ಸುಡಿ ಎಂದು ಸಿದ್ದರಾಮಯ್ಯ ಅವರು ಕರೆಕೊಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು, ಆರ್ಎಸ್ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ ಅವರು ಭಯಭೀತರಾಗಿದ್ದಾರೆ. ಚಡ್ಡಿ ಸುಡಲು ಹೊರಟಿರುವ ಸಿದ್ದರಾಮಯ್ಯ ಬಗ್ಗೆ ಮರುಕ ಪಡಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಉಗ್ರಗಾಮಿಗಳ ಸಂತಾನ: ಸಿದ್ದು ಸವದಿ
ಅಂದಿನ ಪ್ರಧಾನಿ ನೆಹರೂ ಅವರು ಆರ್ಎಸ್ಎಸ್ ಸಂಘವನ್ನು ಪ್ರಶಂಸಿಸಿದ್ದರು. ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆರ್ಎಸ್ಎಸ್ಗೆ ಅವಕಾಶ ಕೊಟ್ಟಿದ್ದರು. ಪ್ರಣಬ್ ಮುಖರ್ಜಿ ನಾಗಪುರದಲ್ಲಿ ಆರ್ಎಸ್ಎಸ್ ರಾಷ್ಟ್ರಭಕ್ತರ ಸಂಘಟನೆ ಎಂದು ಹೇಳಿದ್ದರು. ಆರ್ಎಸ್ಎಸ್ ಚಡ್ಡಿ ಸುಡಲು ಹೊರಟರೆ ಕಾಂಗ್ರೆಸ್ ಅಧೋಗತಿಗೆ ಕಾರಣವಾಗುತ್ತೆ. ಚಡ್ಡಿ ಹಾಕಿಕೊಂಡೇ ಚಡ್ಡಿ ಸುಡಿ ಎಂದು ಯಾರೋ ಹೇಳಿದರು ಎಂದು ತಿರುಗೇಟು ಕೊಟ್ಟರು.
ದಿನದಿಂದ ದಿನಕ್ಕೆ ಕಾಂಗ್ರೆಸ್ ವೋಟುಗಳು ಕಡಿಮೆಯಾಗೋದು ಖಚಿತ. ರಾಜ್ಯಾದ್ಯಂತ ಸಿದ್ದರಾಮಯ್ಯ ಅವರಿಗೆ ನಲಪಾಡ್ ಅವರಿಗೆ ಮತ್ತು ಕೆಪಿಸಿಸಿ ಕಚೇರಿಗೆ ಚಡ್ಡಿಗಳನ್ನು ಕಳುಹಿಸಿಕೊಡುವ ಮೂಲಕ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಜನ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ ಎಂದರು.