ಚಾಮರಾಜನಗರ: ತಮಿಳುನಾಡಿನ ಕೆಲವರ ಮಾತು ಕೇಳಿಕೊಂಡು, ಮತ ರಾಜಕೀಯಕ್ಕಾಗಿ ಬಿಜೆಪಿ ಮೇಕೆದಾಟು ಯೋಜನೆ ಜಾರಿ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ನಗರದಲ್ಲಿ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿನ ಉಸ್ತುವಾರಿ ಸಿ.ಟಿ.ರವಿಯನ್ನ ಲೂಟಿ ರವಿ ಅಂತಲೂ ಕರೆಯುತ್ತಾರೆ. ಅವನು ಅಣ್ಣಾಮಲೈ ಅವರನ್ನು ಎತ್ತಿಕಟ್ಟಿ ಧರಣಿ ಮಾಡಿಸುತ್ತಿದ್ದಾನೆ. ತಮಿಳುನಾಡಿನವರ ಮಾತು ಕೇಳಿ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಮೇಕೆದಾಟು ಯೋಜನೆ ಬಗ್ಗೆ ಗೋವಿಂದ್ ಕಾರಜೋಳ ಅವರು ಮಾತನಾಡಿದ್ದು, ಅವರಲ್ಲಿ ದಾಖಲೆ ಇದೆಯಂತೆ ಸ್ಫೋಟ ಮಾಡ್ತಾರಂತೆ. ಅದೇನು ದಾಖಲೆ ಇದೆಯೋ ಬಿಡುಗಡೆ ಮಾಡಲಿ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಕಾರಜೋಳರಿಗೆ ಸವಾಲು ಎಸೆದರು. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
ನಮ್ಮ ಸರ್ಕಾರದ ವೇಳೆ 5912 ಕೋಟಿ ಡಿಪಿಆರ್ ರೆಡಿ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದವು. ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದಾಗ 9 ಸಾವಿರಕ್ಕೆ ಹೆಚ್ಚಿಸಿ ಮತ್ತೊಮ್ಮೆ ಡಿಪಿಆರ್ ಕಳುಹಿಸಿದ್ವಿ. ಡಿಪಿಆರ್ ಸಲ್ಲಿಸಿ ಮೂರು ವರ್ಷ ಕಳೆದಿದೆ. ಮೂರು ವರ್ಷ ಕಳೆದರೂ ಏನ್ ಕಡೆದುಕಟ್ಟೆ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಅಷ್ಟೇ ಸಿಗಬೇಕಿದೆ. ಮಾತಿಗೆ ಮುನ್ನ ಪ್ರಧಾನಿ ಮೋದಿ ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಡಬ್ಬಲ್ ಇಂಜಿನ್ ಸರ್ಕಾರ ಇದ್ರೆ ಯಾಕೆ ಯೋಜನೆ ಜಾರಿಗೆ ತರುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ರಾಕ್ಷಸರು!
ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆಂಗಲ್ ಹನುಮಂತಯ್ಯ ಬರೆಸಿದ್ದಾರೆ. ಆದರೆ ಈಗ ಅಲ್ಲಿ ಮನುಷ್ಯರ ರಕ್ತ ಹೀರುವವರು, ರಾಕ್ಷಸರು ಇದ್ದಾರೆ. ಅವರನ್ನೆಲ್ಲಾ ಒದ್ದು ಓಡಿಸಬೇಕಲ್ವಾ, ನಮ್ಮ ಕಾಲದಲ್ಲಿ ನಡೆದ ಕಾಮಗಾರಿಗಳಿಗೆ ಇನ್ನು ಬಿಲ್ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ವಿಜಯೇಂದ್ರಗೂ ಸೋಮಣ್ಣಗೂ ಆಗಲ್ಲ!
ಬಿ.ವೈ.ವಿಜಯೇಂದ್ರಗೂ, ಸಚಿವ ವಿ.ಸೋಮಣ್ಣ ಅವರಿಗೂ ಆಗ್ತಿರಲಿಲ್ಲ. ಅದಕ್ಕಾಗಿಯೇ ಸೋಮಣ್ಣ ಅವರು ಖಾತೆಗೆ ಒಂದು ರೂಪಾಯಿ ಕೊಟ್ಟಿರಲಿಲ್ಲ. ಹೀಗಾಗಿಯೇ ವಸತಿ ಯೋಜನೆಗಳು ಕುಂಠಿತಗೊಂಡಿವೆ. ನಾನು ಈ ಬಗ್ಗೆ ಕೇಳಿದ್ರೆ ಸೋಮಣ್ಣ ಅವರು ಅಸಹಾಯಕತೆ ತೋಡಿಕೊಳ್ತಾರೆ. ಹೀಗಾಗಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕಬಾರದು. ಗಡಿಜಿಲ್ಲೆಯಿಂದಲೇ ಕಾಂಗ್ರೆಸ್ ನ ದಿಗ್ವಿಜಯ ಯಾತ್ರೆ ಆರಂಭವಾಗಬೇಕು ಎಂದು ಕರೆಕೊಟ್ಟರು.
ಸಿಎಂ ಸ್ಥಾನ ಗಟ್ಟಿ!
ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಇತ್ತು. ಸಮಾಜವಾದ ಪಾಲಿಸುತ್ತಿದ್ದ ಜೆ.ಎಚ್.ಪಟೇಲ್ ಅವರೂ ಈ ಮೌಢ್ಯ ನಂಬಿ ಚಾಮರಾಜನಗರಕ್ಕೆ ಬರಲಿಲ್ಲ. ಆದರೆ ನಾನು 10 ರಿಂದ 12 ಬಾರಿ ಬಂದಿದ್ದೆ. ಇಲ್ಲಿಗೆ ಬಂದ ನಂತರವೇ ನನ್ನ ಸಿಎಂ ಸ್ಥಾನ ಗಟ್ಟಿಯಾಯಿತು. ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ನನ್ನ ಕಾರ್ಯಕ್ರಮಗಳ ಕಾಮಗಾರಿಯನ್ನೇ ಈಗಲೂ ಮಾಡುತ್ತಿದ್ದಾರೆ, ಉದ್ಘಾಟಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಜ.14ಕ್ಕೆ ಪಂಚಮಸಾಲಿ ಹೋರಾಟ ವರ್ಷಾಚರಣೆ: ಜಯಮೃತ್ಯುಂಜಯ ಸ್ವಾಮಿ
ಆಕ್ಸಿಜನ್ ಕೊರತೆಯಿಂದ ಮೂರೇ ಜನ ಎಂದು ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಸಚಿವ ಸುರೇಶ್ ಕುಮಾರ್ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದರು. ಆದರೆ 36 ಜನ ಸತ್ತಿದ್ದಾರೆ ಎಂದು ಅಧಿಕಾರಿಗಳೇ ನಮ್ಮ ಮುಂದೆ ಒಪ್ಪಿಕೊಂಡಿದ್ದರು. 36 ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಸುಧಾಕರ್ ಅವರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ಜನದ್ರೋಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮನೆಗೊಂದು ಆಳು ಬನ್ನಿ
ನಿಮಗೆ ನೀರು ಬೇಕು ಅಂದ್ರೆ ಮನೆಗೊಂದು ಆಳಂತೆ ಬರಬೇಕು. ಮೇಕೆದಾಟು ಯೋಜನೆಯಿಂದ ಚಾಮರಾಜನಗರಕ್ಕೂ ಅನುಕೂಲ, ಕನಿಷ್ಠ 10 ಸಾವಿರ ಜನರು ಬರಬೇಕು ಎಲ್ಲ ವ್ಯವಸ್ಥೆಯನ್ನು ಡಿಕೆಶಿ ಮಾಡಿದ್ದಾರೆ ಎಂದು ಆಹ್ವಾನವಿತ್ತರು.