ಚಿಕ್ಕಮಗಳೂರು: ಲೋಕಸಭೆ ಚುನಾವಣೆ ವೇಳೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟನೆ ಮಾಡಿ, ಗೋ ಬ್ಯಾಕ್ ಅನ್ನುತ್ತಿದ್ದೋರು ಬಳಿಕ ಆಯಮ್ಮನನ್ನೇ ಗೆಲ್ಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಜನ ಶೋಭಾ ಅವರ ವಿರುದ್ಧ ಚುನಾವಣೆ ಮುಂಚೆ ಪ್ರತಿಭಟನೆ ಮಾಡುತ್ತಿದ್ದರು. ಆದರೆ ಮತ್ತೆ ಆಯಮ್ಮನಿಗೆ ವೋಟ್ ಹಾಕಿದ್ದಾರಲ್ಲಾ ಹೆಂಗಪ್ಪಾ? ಗೋ ಬ್ಯಾಕ್ ಅನ್ನುತ್ತಿದ್ದೋರು, ಮೂರು ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಇನ್ನ 5 ವರ್ಷ ಈ ಕಡೆ ಅವರು ಬರಲ್ಲ ಎಂದು ಟಾಂಗ್ ಕೊಟ್ಟರು.
ನೆರೆ ಪರಿಹಾರ ಸಿಗದೇ, ಸಾಲ ಭಾದೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬದ ಪರಿಸ್ಥಿತಿ ಬಗ್ಗೆ ಕೇಳದ ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಿಟಿ ರವಿ ಅವರನ್ನು ಸಿದ್ದರಾಮಯ್ಯ ಟೀಕಿಸಿದರು. ಚಿಕ್ಕಮಗಳೂರಿನಲ್ಲಿ ಪ್ರವಾಹ ಪರಿಹಾರ ಸಿಗದೇ, ಸಾಲಬಾಧೆಗೆ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಶೋಭಾ ಅಥವಾ ಸಚಿವ ಸಿಟಿ ರವಿ ಆ ಕಡೆ ಹೋಗಿಲ್ಲ. ರೈತರ ಕುಟುಂಬದ ಅಳಲನ್ನು ಆಲಿಸಿಲ್ಲ ಎಂದು ಕಿಡಿಕಾರಿದರು. ನಾನು ಚಿಕ್ಕಮಗಳೂರಿಗೆ ಬರುತ್ತಿದ್ದೇನೆ ಎಂದು ಗೊತ್ತಾದ ಬಳಿಕ ಮರುದಿನ ಬೆಳಗ್ಗೆಯೇ ಮೂಡಿಗೆರೆ ಎಂಎಲ್ಎ ಕುಮಾರಸ್ವಾಮಿ ರೈತರ ಮನೆಗೆ ಓಡಿ ಹೋದರು. ಅಲ್ಲಿಯವರೆಗೆ ಈ ಬಗ್ಗೆ ನೆನಪಿರಲಿಲ್ಲ ಎಂದು ವ್ಯಂಗ್ಯವಾಡಿದರು.