ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಬಿಹಾರದಲ್ಲಿ ಯಾವ ಸರ್ಕಾರ ಇದೆ ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿರುವ ಮೈತ್ರಿ ಬಗ್ಗೆ ಮಾತನಾಡುತ್ತಾರೆ. ಆದ್ರೆ ಬಿಹಾರದಲ್ಲಿ ಯಾವ ಸರ್ಕಾರ ಇದೆ? ಬಿಹಾರದಲ್ಲಿ ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯ ಸುಶೀಲ್ ಮೋದಿ ಡಿಸಿಎಂ ಆಗಿದ್ದಾರೆ. ಅಲ್ಲಿ ಯಾವ ಸರ್ಕಾರ ಇದೆ? ಅವರ ಮಾತುಗಳು ಅವರಿಗೆ ತಿರುಗುಬಾಣ ಆಗುತ್ತಿದೆ ಅಂತ ಅವರಿಗೇ ಗೊತ್ತಾಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:ಬಾಲಕೋಟ್ನಲ್ಲಿ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ಗೆ ನೋವಾಗಿದೆ: ಮೋದಿ
ಒಬ್ಬ ಪ್ರಧಾನಮಂತ್ರಿ ಆಗಿ ಬೇಜಾವಾಬ್ದಾರಿಯಾಗಿ ಮಾತನಾಡಬಾರದು. ಜವಾಬ್ದಾರಿಯುತವಾಗಿ ಮೋದಿ ಮಾತನಾಡಲಿ. ಆಧಾರಸಹಿತವಾಗಿ ಪ್ರಧಾನಮಂತ್ರಿ ಮೋದಿ ಮಾತನಾಡಬೇಕು. ಅವರದ್ದು ಹಿಟ್ ಅಂಡ್ ರನ್ ಕೇಸ್. ಆರೋಪ ಮಾಡಬೇಕಾದರು ಜವಾಬ್ದಾರಿಯಿಂದ ಮಾತನಾಡಬೇಕಲ್ವಾ? ಅವರು ಘಟಬಂಧನ್ ಬಗ್ಗೆ ಮಾತನಾಡುತ್ತಾರೆ. ಅವರು ಯಾವ ಬಂಧನ ಮಾಡಿಕೊಂಡಿರುವುದು? ಎನ್ಡಿಎ ಅಂದರೆ ಏನು ಬಿಜೆಪಿ ಅಂತಾನ? ಅದರಲ್ಲಿ 13 ಪಕ್ಷಗಳು ಇದ್ದಾವೆ. ಅವರು ಮೈತ್ರಿ ಮಾಡಿಕೊಂಡಿದ್ದಾರೆ ಆದ್ರೆ ಬೇರೆ ಅವರು ಮೈತ್ರಿ ಸರ್ಕಾರ ಮಾಡಿದರೆ ವಿರೋಧ ಮಾಡುತ್ತಾರೆ ಎಂದು ಕಿಡಿಕಾರಿದರು.
ಬಿಜೆಪಿ ಅಭ್ಯರ್ಥಿಗಳು ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಅಂತಾರೆ. ಯಾಕೆ ಇವರು ಏನೂ ಮಾಡಿಲ್ಲವೇ? ರೈತರ ಸಾಲ ಮನ್ನಾ ಮಾಡದೇ ಇದ್ದದ್ದಕ್ಕೆ ಮೋದಿ ಮುಖ ನೋಡಬೇಕಾ? 15 ಲಕ್ಷ ಹಾಕ್ತೀರಿ ಅಂದ್ದಿದ್ದರು. ಆ ಹಣವನ್ನು ರೈತರ ಖಾತೆಗೆ ಹಾಕಿದ್ದಾರಾ? ಮತ್ತೆ ಅವರ ಮುಖ ಹೇಗೆ ನೋಡೋದು? ಚೌಕಿದಾರ್ ಅನ್ನೊದು ಪ್ಯಾಶನ್ ಅಗಿಬಿಟ್ಟಿದೆ. ಕರ್ನಾಟಕದಲ್ಲಿ ಎಲ್ಲರೂ ಚೌಕಿದಾರಗಳಾಗಿದ್ದಾರೆ. ಯಡಿಯೂರಪ್ಪ, ಅಮಿತ್ ಷಾ, ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಚೌಕಿದಾರರೇ? ನಾಚಿಕೆಯಾಗಲ್ವೇ ಇವರಿಗೆ ಎಂದು ಹರಿಹಾಯ್ದರು.
5 ವರ್ಷದಲ್ಲಿ ನರೇಂದ್ರ ಮೋದಿ ಏನು ಮಾಡಿದ್ದಾರೆ? ನೋಟ್ ಬ್ಯಾನ್ ಮಾಡಿದ್ದು ಯಾಕೆ ಅಂತ ಮೋದಿ ಹೇಳಲೇ ಇಲ್ಲ. ಕಪ್ಪು ಹಣ ಎಷ್ಟು ಬಂತು ಹೇಳಿ ಮೋದಿಯವರೇ? ದೊಡ್ಡ ದೊಡ್ಡ ಶ್ರೀಮಂತರು ವೈಟ್ ಮನಿ ಮಾಡಿಕೊಳ್ಳಲು ನೋಟ್ ಬ್ಯಾನ್ ಮಾಡಿದ್ದಾರೆ. ಈ ಡೋಂಗಿ ರಾಜಕಾರಣ ಎಷ್ಟು ದಿನ ಮಾಡ್ತೀರಾ ಮೋದಿ? ಬಿಜೆಪಿಯ ಬಚ್ಚೇಗೌಡನಿಗೆ ಮತ ಹಾಕಬೇಡಿ. ವೀರಪ್ಪಮೊಯ್ಲಿಗೆ ಮತ ಹಾಕಿ ಎಂದು ಮನವಿ ಮಾಡಿದರು.