ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಸೋಲಿನ ಶಾಕ್ ಇನ್ನೂ ಮರೆತಂತೆ ಕಾಣಿಸುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿದ್ದಂತೆ ಶನಿ, ರಾಹು, ಕೇತುಗಳೆಲ್ಲಾ ಒಟ್ಟುಗೂಡಿ ನನ್ನನ್ನು ಸೋಲಿಸಿದವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕಹಿಯನ್ನು ಮತ್ತೆ ಹೊರಹಾಕಿದ್ದಾರೆ. ಈ ಮೂಲಕ ತಮ್ಮನ್ನು ಸೋಲಿಸಿದ ಪ್ರತಿಸ್ಪರ್ಧಿಗಳನ್ನು ಶನಿ, ರಾಹು, ಕೇತುಗೆ ಹೋಲಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಮಾತು ಕೊಟ್ಟಿದ್ದರಿಂದ ವರುಣಾ ಕ್ಷೇತ್ರ ಬಿಟ್ಟು ಅಲ್ಲಿಗೆ ಹೋದೆ. ಆದರೆ ನನ್ನ ವಿರುದ್ಧವೇ ಉಳಿದ ರಾಜಕೀಯ ಪಕ್ಷಗಳು ತಂತ್ರ ಹೆಣೆದವು ಎಂದ ಅವರು, ಹೊಟ್ಟೆ ಕಿಚ್ಚಿಗೆ ಔಷಧಿ ಎಲ್ಲಾದರೂ ಉಂಟೇ, ಇದು ಹಾಗೇನೆ ಎಂದು ವ್ಯಂಗ್ಯವಾಡಿದರು.
ಶಾಪಿಂಗ್ ಮೂಡ್: ಹೊಸಕೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಸಿದ್ದರಾಮಯ್ಯ ಅವರು ನೇರವಾಗಿ ಮೈಸೂರಿಗೆ ಆಗಮಿಸಿದರು. ಶಾಪಿಂಗ್ ಮೂಡ್ ನಲ್ಲಿದ್ದ ಅವರು, ನಗರದ ದೇವರಾಜ ಅರಸು ರಸ್ತೆಗೆ ತೆರಳಿ ಶಾಪಿಂಗ್ ಮಾಡಿದರು. ನೈಕ್ ಮಳಿಗೆಗೆ ಭೇಟಿ ನೀಡಿ, ಮುಂಜಾನೆಯ ವಾಯುವಿಹಾರಕ್ಕೆ ಅಗತ್ಯವಾದ ಬಟ್ಟೆಗಳು ಹಾಗೂ ಶೂ ಖರೀದಿಸಿದರು. ಈ ವೇಳೆ ಪುತ್ರ ಶಾಸಕ ಡಾ.ಯತೀಂದ್ರ ಹಾಗೂ ಸಂಸದ ಧ್ರುವನಾರಾಯಣ ಅವರು ಜೊತೆಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv