ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಅಕ್ರಮ ನಡೆದಿರೋದು ನಿಜ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಒಪ್ಪಿಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗೆ ನಾನು ಈಗ ಸಚಿವ. ನಾಗೇಂದ್ರ ರಾಜೀನಾಮೆ ಕೊಟ್ಡ ಮೇಲೆ ನಾನು ಆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಾವು ಅಕ್ರಮ ಆಗಿಲ್ಲ ಅಂತ ಹೇಳ್ತಿಲ್ಲ, ಅಕ್ರಮ ಆಗಿದೆ. ಯಾರು ಮಾಡಿದ್ದು, ಯಾರು ಜವಾಬ್ದಾರಿ? ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಅಂತ ಸಿಎಂ ಹೇಳಿದ್ದಾರೆ.
ನಿಗಮದ ಎಂಡಿ ಹೊಣೆಗಾರ:
ಹಣಕಾಸು ಜವಾಬ್ದಾರಿ ನಿಭಾಯಿಸೋದು ನಿಗಮದ ಎಂಡಿ, ಅಧಿಕಾರಿಗಳ ಜವಾಬ್ದಾರಿ. ಹಣದ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರೋದು ಎಂಡಿಯದ್ದು. ಮಿನಿಸ್ಟರ್ ಪಾಲಿಸಿ ಮೇಕರ್, ಆದರೆ ಹೆಚ್ಚು ಜವಾಬ್ದಾರಿ ಎಂಡಿಯದ್ದು. ಎಂಡಿ ನಿಗಮದ ಹೆಡ್ ಆಗಿರುತ್ತಾರೆ, ಅಧ್ಯಕ್ಷರೂ ಅಲ್ಲ. ದದ್ದಲ್ ಅವರನ್ನ ಅಧ್ಯಕ್ಷರಾಗಿ ಮಾಡಿದ್ವಿ. ನಾಗೇಂದ್ರ ಮಿನಿಸ್ಟರ್ ಆಗಿದ್ರು. ಅವರ ಕಾಲದಲ್ಲಿ ಅಕ್ರಮ ಆಗಿದೆ ಅಂತ ಎಂದು ಸ್ಪಷ್ಟಪಡಿಸಿದ್ದಾರೆ.
ನಿಗಮದ ಹಣವನ್ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಸಂತ ನಗರ ಶಾಖೆಯಲ್ಲಿ ಇಡಲಾಗಿತ್ತು. ಅಲ್ಲಿ ಶೋಭನಾ ಎನ್ನುವ ವ್ಯವಸ್ಥಾಪಕಿ ಎಂ.ಜಿ ರಸ್ತೆಯ ಬ್ರ್ಯಾಂಚ್ಗೆ ಹಣವನ್ನ ವರ್ಗಾಯಿಸಿದ್ದಾರೆ. ಬೇರೆ ಬೇರೆ ಕಡೆಯಿಂದ 187 ಕೋಟಿ 33 ಲಕ್ಷ ರೂ. ಹಣವನ್ನ ಎಂ.ಜಿ ರಸ್ತೆಯ ಶಾಖೆಗೆ ವರ್ಗಾವಣೆ ಮಾಡಿದ್ದಾರೆ. ಎಂ.ಜಿ ರಸ್ತೆ ಶಾಖೆಯ ದೀಪಾ, ಕೃಷ್ಟಮೂರ್ತಿ, ಮತ್ತೊಬ್ಬ ಅಧಿಕಾರಿಯೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಶಾಖೆಯಿಂದ 187 ಕೋಟಿ ರೂ. ಹಣದಲ್ಲಿ 89.63 ಕೋಟಿ ರೂ. ಹಣ 18 ಅಕೌಂಟ್ಗೆ ತೆಲಂಗಾಣಕ್ಕೆ ಹೋಗಿದೆ ಎಂದು ಹೇಳಿದರು.
ರತ್ನಾಕರ ಸಹಕಾರ ಬ್ಯಾಂಕ್ಗೆ 87 ಕೋಟಿ ಹೋಗುವಾಗ ಯೂನಿಯನ್ ಬ್ಯಾಂಕ್ನವರು ಯಾಕೆ ಹೈದರಾಬಾದ್ಗೆ ಹೋಗ್ತಿದ್ದಾರೆ ಅಂತ ಕೇಳಬೇಕಿತ್ತು ಅಲ್ಲವಾ? ಇದ್ಯಾವುದನ್ನು ಸದನದಲ್ಲಿ ಅಶೋಕ್ ಕೇಳಲಿಲ್ಲ. ನಿಗಮದಲ್ಲಿ ಚಂದ್ರಶೇಖರ ಅನ್ನೋರು ಅಧೀಕ್ಷಕನಾಗಿರುತ್ತಾರೆ. ಮೇ 26 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ತಾರೆ. ಬಳಿಕ ಪತ್ತೆಯಾದ ಡೆತ್ನೋಟ್ನಲ್ಲಿ ಪದ್ಮನಾಭ, ಪರಶುರಾಮ, ಸುಚಿಸ್ಮಿತಾ ಅವರು ಕಾರಣ ಅಂತ ಬರೆದಿರುತ್ತಾರೆ. 25 ಕೋಟಿ ರೂ. ಅಕ್ರಮವಾದ್ರೆ ಸಿಬಿಐಗೆ ದೂರು ಕೊಡೋ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಅದಕ್ಕಾಗಿ ಯೂನಿಯನ್ ಅಧಿಕಾರಿಗಳು ಅಕ್ರಮ ಮಾಡಿರುವ ಬ್ಯಾಂಕ್ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಲು ಒಪ್ಪಿಗೆ ನೀಡಿದ್ದಾರೆ. ದೀಪಾ, ಸುಚಿಸ್ಮಿತಾ ಮೇಲೂ ತನಿಖೆಗೆ ಒಪ್ಪಿಗೆ ಕೊಟ್ಟಿರುತ್ತಾರೆ. ಈ ಹಗರಣದಲ್ಲಿ ಎಸ್ಐಟಿ ತನಿಖೆ ಮಾಡ್ತಿದೆ. ಸಿಬಿಐ, ಇಡಿ ತನಿಖೆ ಮಾಡ್ತಿದೆ. ಇಡಿ ಸ್ವಯಂಪ್ರೇರಿತವಾಗಿ ತನಿಖೆ ಮಾಡ್ತಿದೆ. ಇಡಿ ಈವರೆಗೆ ದದ್ದಲ್, ನಾಗೇಂದ್ರ ಮನೆಗಳು, ಬೇರೆ ಅವರ ಮನೆ ಮೇಲೆ ರೇಡ್ ಮಾಡಿದ್ದಾರೆ. ನಾಗೇಂದ್ರರನ್ನ ಅರಸ್ಟ್ ಮಾಡಿದ್ದಾರೆ ದದ್ದಲ್ರನ್ನ ವಿಚಾರಣೆಗೆ ಕರೆದಿದ್ದಾರೆ ಎಂದು ವಿವರಿಸಿದ್ದಾರೆ.
ಸದನದಲ್ಲಿ 7 ಗಂಟೆಗೂ ಹೆಚ್ಚು ಕಾಲ ಚರ್ಚೆ:
ಬಿಜೆಪಿ-ಜೆಡಿಎಸ್ ಅವರು ವಾಲ್ಮೀಕಿ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ರು. ನಿಯಮ 69ಕ್ಕೆ ಸ್ಪೀಕರ್ ಅವಕಾಶ ಕೊಟ್ಟಿದ್ದರು. ನಾವು ವಿರೋಧ ಮಾಡದೇ ಚರ್ಚೆಗೆ ಅವಕಾಶ ಕೊಟ್ವಿ. ಗುರುವಾರ ಮಧ್ಯಾಹ್ನದವರೆಗೂ ಚರ್ಚೆ ಮಾಡಿದ್ರು. ಅಶೋಕ್ 3 ಗಂಟೆ ಚರ್ಚೆ ಮಾಡಿದ್ರು, ಒಟ್ಟು 7 ಗಂಟೆಗೂ ಹೆಚ್ಚು ಕಾಲ ಚರ್ಚೆ ಆಗಿದೆ. ಸಂಸದೀಯ ವ್ಯವಸ್ಥೆಯಲ್ಲಿ ಪ್ರಸ್ತುತ ವಿಚಾರ ಚರ್ಚೆಗೆ ಅವಕಾಶ ಇದೆ. ಅಷ್ಟೇ ಹಕ್ಕು ಸರ್ಕಾರಕ್ಕೆ ಇದೆ. ಸರ್ಕಾರದ ನಿಲುವು ಹೇಳಲು, ಉತ್ತರ ಕೊಡಲು ಹಕ್ಕು ಇದೆ ಎಂದು ವಿವರಿಸಿದರು.