ರಾಮನಗರ: ಕೊರೊನಾ ಹೆಚ್ಚಳದಿಂದಾಗಿ ಜನರ ಹಿತದೃಷ್ಟಿಯಿಂದಾಗಿ ಮೇಕೆದಾಟು ಪಾದಯಾತ್ರೆಯನ್ನು ರದ್ದು ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಪಕ್ಷದ ನಾಯಕರ ಜೊತೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತೀರ್ಮಾನದಂತೆ ಜ.9ರಂದು ಸಂಗಮದಿಂದ ಪ್ರಾರಂಭ ಆಯ್ತು. ನಮ್ಮ ಮುಖಂಡರು ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಿತ್ತು. ಕೋವಿಡ್ ವೇಗವಾಗಿ ಹರಡುತ್ತಿದೆ. ಇದರಿಂದ ಮೊಟಕುಗೊಳಿಸಿದ್ದೇವೆ. ಕೊರೊನಾ ಸೋಂಕು ಕಡಿಮೆ ಆದಮೇಲೆ ಮತ್ತೇ ರಾಮನಗರದಿಂದಲೇ ಪಾದಯಾತ್ರೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯ ಮಾಡಿ 4 ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸುಗಳಿಸಿದ್ದೇವೆ. ಬಹಳ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ. ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದಾಗ ಮೂರನೇ ಅಲೆ ಪ್ರಾರಂಭ ಆಗಿರಲಿಲ್ಲ. ನಾವು ಇದನ್ನ ಎರಡು ತಿಂಗಳ ಮುಂಚೆಯೇ ತೀರ್ಮಾನ ಮಾಡಿದ್ದೇವು ಎಂದರು. ಇದನ್ನೂ ಓದಿ: 5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ
ಬಿಜಪಿಯವರು ಜನರ ಬಗ್ಗೆ ಮೊಸಳೆ ಕಣ್ಣಿರು ಸುರಿಸಿ ಪಾದಯಾತ್ರೆಯನ್ನು ಕೊನೆಗೊಳಿಸಿದ್ದಾರೆ. ಸುಭಾಷ್ ಹುದ್ದೆದಾರ್, ರೇಣುಕಾಚರ್ಯಾ ಜಾತ್ರೆ ಮಾಡಿ ಮೆರವಣಿಗೆ ಮಾಡಿದ್ದರು. ಕೇಂದ್ರ ಸಚಿವರು ಎರಡನೇ ಅಲೆಯಲ್ಲಿ ಜನಶೀರ್ವಾದ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದರು. ಆರಗ ಜ್ಞಾನೆಂದ್ರ ಕ್ಷೇತ್ರದಲ್ಲಿ ಜಾತ್ರೆಗೆ ಅವಕಾಶ ನೀಡಿದ್ದಾರೆ. ಇಷ್ಟೇಲ್ಲಾ ಆದರೂ ಸರ್ಕಾರ ಕೊರೊನಾ ಉಲ್ಲಂಘಿಸಿದ ಯಾರ ಮೇಲೂ ಕೇಸ್ ಹಾಕಲಿಲ್ಲ ಎಂದು ಕಿಡಿಕಾರಿದರು.
ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್ಗೂ ಕಳುಹಿಸಿದ್ದಾರೆ. ಈ ಪಕ್ಷ ರೋಗ ತಡೆಯುವಲ್ಲಿ ನಿಷ್ಪಕ್ಷಪಾತವಾಗಿಲ್ಲ. ಇವರದ್ದು ದುರುದ್ದೇಶವಾಗಿದೆ. ನಮ್ಮ ಪಾದಯಾತ್ರೆ ನಿರ್ಬಂಧಗೊಳಿಸುವುದೇ ಅವರ ಉದ್ದೇಶವಾಗಿದೆ. ಅದಕ್ಕಾಗಿ ದಿನಕ್ಕೊಂದು ಆದೇಶವನ್ನ ಎಸ್ಪಿ, ಡಿಸಿ ಕಡೆಯಿಂದ ನೀಡಿದ್ದಾರೆ. ನಾವು ನೋಟಿಸ್ಗೆಲ್ಲ ಹೆದುರುವುದಿಲ್ಲ. ನಮಗೆ ಜನರ ಆರೋಗ್ಯ ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು
15 ಸಾವಿರ ಸೋಂಕು ಪಾದಯಾತ್ರೆಯಿಂದ ಪತ್ತೆಯಾಗಿಲ್ಲ. ದೇಶದ್ಯಾಂತ ಸ್ವಾಭಾವಿಕವಾಗಿ ಮೂರನೇ ಅಲೆ ಏರಿಕೆ ಆಗುತ್ತಿದೆ. ನಮಗೆ ರಾಜ್ಯದ ಜನರ ಆರೋಗ್ಯ ಕಾಳಜಿ ಇದೆ. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯಿಂದ ಸೋಂಕು ಉಲ್ಬಣ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಎಂದು ತಿಳಿಸಿದರು.