– ಪಕ್ಷಾಂತರ ನಿಷೇಧ ಕಾಯ್ದೆ ಮತ್ತಷ್ಟು ಬಲಗೊಳ್ಳಬೇಕು
ಹುಬ್ಬಳ್ಳಿ: ಸಂಸದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ಅವರು ನಿರಾಕರಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊದಿಗೆ ಮಾತನಾಡಿದ ಅವರು, ಸಿಎಂ ಕುರಿತ ಪ್ರಶ್ನೆಗೆ ಗರಂ ಆದರು. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದು, ಎರಡು ಪಕ್ಷಗಳನ್ನ ಉತ್ತಮವಾಗಿ ನಡೆಸಿಕೊಂಡು ಹೋಗುವುದು ನನ್ನ ಕೆಲಸ, ಅದನ್ನು ನಾನು ಮಾಡುತ್ತಿದ್ದೇನೆ. ಸಿಎಂ ಆಗಬೇಕಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿಲ್ಲ. ಆದ್ದರಿಂದ ಸಿಎಂ ಹೇಳಿಕೆಗೆ ನಾನು ರಿಯಾಕ್ಟ್ ಮಾಡಬೇಕೇ? ಇದು ನನ್ನ ಕೆಲಸವಲ್ಲ ಎಂದು ಹೇಳಿ ಕೆಂಡಾಮಂಡಲರಾದರು.
ಇದಕ್ಕೂ ಮುನ್ನ ಸ್ವಾರ್ಥ, ಹಣದ ಆಮಿಷಕ್ಕೆ ಅನೇಕರು ಬಲಿಯಾಗುತ್ತಿದ್ದು, ರಾಜಕೀಯ ವ್ಯವಸ್ಥೆ ಹಾಳಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಮಾಜಿ ಶಾಸಕ ಉಮೇಶ ಜಾಧವ್ ಪ್ಯಾಕೇಜ್ ಡೀಲ್ಗೆ ಒಳಗಾಗಿದ್ದಾರೆ. ಆದರೆ ಬೇರೆ ಶಾಸಕರು ರಾಜೀನಾಮೆ ಕೊಟ್ಟು ಹೋಗುವುದಕ್ಕೆ ಆಗುವುದಿಲ್ಲ. ಆದರೂ ಪಕ್ಷಾಂತರ ನಿಷೇಧ ಕಾಯ್ದೆ ಮತ್ತಷ್ಟು ಬಲಗೊಳ್ಳಬೇಕು. ಜನರು ಆಯ್ಕೆ ಮಾಡಿ ಕಳುಹಿಸುತ್ತಾರೆ, ಆದರೆ ಶಾಸಕರು ರಾಜೀನಾಮೆ ನೀಡಿದರೆ ಜನರಿಗೆ ಮೋಸ ಮಾಡಿದಂತೆ. ನಮ್ಮಂತಹ ನಾಯಕರೇ ಇಂತಹ ಸಂಸ್ಕೃತಿ ಬೆಳೆಸಿದ್ದಾರೆ. ನಾವು ಇದರತ್ತ ಗಮನಹರಿಸ ಬೇಕಿದೆ ಎಂದರು.
ಇದೇ ವೇಳೆ ಈಶ್ವರಪ್ಪ ಅವರ ನರಸತ್ತವರು ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾನು ಈಗಾಗಲೇ ಈಶ್ವರಪ್ಪ ಅವರ ನಾಲಿಗೆ ಹಾಗೂ ಬ್ರೈನ್ಗೆ ಸಂಪರ್ಕ ಕಡಿತ ಆಗಿದೆ ಅಂತ ಹೇಳಿದ್ದೆನೆ. ಸಚಿವ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದ್ದರಿಂದ ನಾನು ಏನು ಮಾತನಾಡಲ್ಲ ಎಂದರು.
ಮೇ 23ರ ಗಡುವಿನ ಬಗ್ಗೆ ಪ್ರತಿಕ್ರಿಯೆ ನೀಡಿ ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದ ಇದೇ ಹೇಳಿಕೆಯನ್ನ ಬಿಜೆಪಿ ನಾಯಕರು ನೀಡುತ್ತಿದ್ದಾರೆ. ಜನರು ಕೂಡ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷ ಬಿಡಲ್ಲ. ಸರ್ಕಾರದಲ್ಲಿ ಅವರನ್ನು ಡಿಸಿಎಂ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು.