ಬೆಂಗಳೂರು: ನಾಳೆ ಸಂಜೆ 6.45ಕ್ಕೆ ಮಂತ್ರಿ ಮಾಲ್ನ ಸ್ಕ್ರೀನ್ನಲ್ಲಿ ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸದನದಲ್ಲೇ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಹ್ವಾನ ನೀಡಿದ್ದಾರೆ. ಆದರೆ ಸ್ಪೀಕರ್ ಆಹ್ವಾನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
ಏನದು ಸಿನಿಮಾ? ನಾನು ಸಿನಿಮಾ ನೋಡಲು ಹೋಗ್ತಾ ಇಲ್ಲ. ಆಸಕ್ತಿ ಇರುವವರು ಹೋಗುತ್ತಾರೆ ಅನಿಸುತ್ತೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ
ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡ ಕುರಿತ ಚಿತ್ರ ʻದಿ ಕಾಶ್ಮೀರ್ ಫೈಲ್ಸ್ʼ ವೀಕ್ಷಣೆಗೆ ನಾಳೆ ವಿಧಾನಸಭೆ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿಧಾನಸಭೆ ಕಲಾಪದಲ್ಲಿಂದು ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿಗೆ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದರು.
ನಾಳೆ ಸಂಜೆ 6.45 ಕ್ಕೆ ಮಂತ್ರಿ ಮಾಲ್ನಲ್ಲಿ ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವಿಧಾನಸಭೆ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸ್ಪೀಕರ್ ಕಾಗೇರಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!
ಶಾಸಕರು ಹಾಗೂ ಸಚಿವರು ಸಿನಿಮಾ ವೀಕ್ಷಿಸಲು ಬರಬೇಕು. ಎಲ್ಲರೂ ಜೊತೆಗೂಡಿ ನೋಡೋಣ. ವಿರೋಧ ಪಕ್ಷಗಳ ಸದಸ್ಯರೂ ಸಿನಿಮಾ ನೋಡಲು ಬರಬೇಕು ಎಂದು ಸ್ಪೀಕರ್ ಆಹ್ವಾನ ನೀಡಿದರು. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ ಸಹ ಸಿನಿಮಾ ವೀಕ್ಷಣೆ ಮಾಡಿದರು. ಬಳಿಕ ಸಿಎಂ ಈ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ ಘೋಷಣೆ ಮಾಡಿದರು.