ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ರಮೇಶ್ ಕುಮಾರ್ ಅವರ ಆದೇಶವನ್ನು ಕೋರ್ಟ್ ಭಾಗಶಃ ಎತ್ತಿಹಿಡಿದಿದೆ. ಕಾಂಗ್ರೆಸ್ಸಿನ 14 ಶಾಸಕರು ಹಾಗೂ ಜೆಡಿಎಸ್ನ 3 ಶಾಸಕರು ರಾಜೀನಾಮೆ ನೀಡಿ, ವಿಪ್ ಉಲ್ಲಂಘಿಸಿದ್ದರು. ಆಗ ನಾನು ಮತ್ತು ದಿನೇಶ್ ಗುಂಡುರಾವ್ ಅವರು ಸ್ಪೀಕರ್ ಮುಂದೆ ಅರ್ಜಿ ಸಲ್ಲಿಸಿದ್ದೇವು. ಅದರ ಆಧಾರದ ಮೇಲೆ ಸ್ಪೀಕರ್ ಕುಲಂಕುಶವಾಗಿ ವಿಚಾರಣೆ ನಡೆಸಿ ರಾಜೀನಾಮೆ ಕೊಟ್ಟ ಶಾಸಕರು ಅನರ್ಹರು ಎಂದು ಆದೇಶ ಹೊರಡಿಸಿದ್ದರು. ಅದರಲ್ಲಿ ಎರಡು ಭಾಗಗಳಿವೆ. ಒಂದು ಭಾಗ ಪಕ್ಷಾಂತರ ಮಾಡಿದ್ದಾರೆ ಎಂದು ಹಾಗೂ ಇನ್ನೊಂದು ಭಾಗ 15ನೇ ವಿಧಾನಸಭಾ ಅವಧಿ ಮುಗಿಯುವವರೆಗೂ ಉಪಚುನಾವಣೆಗೆ ನಿಲ್ಲಬಾರದು ಎಂದು ಆದೇಶಿಸಿದ್ದರು. ಇದನ್ನೂ ಓದಿ:ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್ವೈ
ಪ್ರಜಾಪ್ರಭುತ್ವದಲ್ಲಿ ಹಾಗೂ 10ನೇ ಶೆಡ್ಯೂಲ್ನಲ್ಲಿ ಒಂದು ಪಕ್ಷದಿಂದ ಗೆದ್ದವರು ರಾಜೀನಾಮೆ ಕೊಡಬಾರದು ಎಂದೇನಿಲ್ಲ. ಆದರೆ ಸ್ವಯಂ ಪ್ರೇರಣೆಯಿಂದ ಹಾಗೂ ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ಹೋದರೆ ರಾಜೀನಾಮೆ ನೀಡಬಹುದು. ಹಾಗಿಲ್ಲದಿದ್ದರೆ ರಾಜೀನಾಮೆಯನ್ನು ಪರಿಗಣಿಸಲು ಆಗುವುದಿಲ್ಲ. ಒಂದು ಪಕ್ಷದಿಂದ ಆಯ್ಕೆಯಾದ ಮೇಲೆ ಅವರು ಮನಸೋಯಿಚ್ಛೆ ನಡೆಕೊಳ್ಳುವಂತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ನೈತಿಕತೆ ಬಗ್ಗೆಯೂ ವಿಚಾರಣೆ ನಡೆದಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಅನೈತಿಕತೆ ಎನ್ನುವುದು ಸುಪ್ರೀಂ ನಿಲುವಾಗಿದೆ. ಇದು ಅನೈತಿಕವಾದದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಅಸಂವಿಧಾನಾತ್ಮಕವಾದದ್ದು, ಮತದಾದರ ನಂಬಿಕೆ ದ್ರೋಹ ಮಾಡಿದಂತೆ, ಇದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವ ಎಂಎಲ್ಎಗಳಿಗೆ ಪಾಠವಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಹೇಳಿದೆ ಎಂದು ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ:ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್
ಅನರ್ಹರು ಉಪಚುನಾವಣೆಗೆ ನಿಲ್ಲಬಹುದು ಎಂದು ಸುಪ್ರೀಂ ಹೇಳಿದೆ ಅದನ್ನು ನಾನು ಸ್ವಾಗತಿಸುತ್ತೇನೆ. ಕೋರ್ಟಿನ ಸಂಪೂರ್ಣ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆದರೆ ಪಕ್ಷಾಂತರ ಮಾಡಿದನ್ನು ಕೋರ್ಟ್ ಒಪ್ಪಿಲ್ಲ. ಬದಲಿಗೆ ಸ್ಪೀಕರ್ ಆದೇಶ ಸರಿಯಂದಿದೆ. ಯಾರೆಲ್ಲಾ ಬೇರೆ ಪಕ್ಷಕ್ಕೆ ಹೋಗಲು ಮುಂದಾಗುತ್ತಾರೋ ಅವರಿಗೂ ಇದು ಪಾಠವಾಗಲಿದೆ ಎಂದು ಹೇಳಿದ್ದಾರೆ. ಉಪಚುನಾವಣೆಯಲ್ಲಿ ನಿಂತರೂ ಜನರು ಅನರ್ಹ ಶಾಸಕರನ್ನ ಸೋಲಿಸುತ್ತಾರೆ. ಅದಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರ ಉದಾಹರಣೆ. ಈ ರಾಜ್ಯಗಳಲ್ಲಿ ಪಕ್ಷಾಂತರ ಮಾಡಿದವರು ಬಹುತೇಕ ಸೋತಿದ್ದಾರೆ ಎಂದು ತಿಳಿಸಿ ಅನರ್ಹರಿಗೆ ಟಾಂಗ್ ಕೊಟ್ಟರು.