ಬೆಳಗಾವಿ: ಸರ್ ನಿಮ್ಮ ಜೊತೆ ಖುದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರ ಮಾತನಾಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿ ಫೋನ್ ಕಟ್ ಮಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿದ್ದರು. ಈ ವೇಳೆ ಮುಂಬೈನಲ್ಲಿದ್ದ ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದು, ವಿಫಲವಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿ ಮಾತನಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಮಾತಿನಿಂದ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿವೆ.
ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರು ಫೋನ್ ಮಾಡಿದಾಗ, ಸರ್ ನಿಮ್ಮ ಜೊತೆ ನಾನೇ ಖದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರಗಳನ್ನು ಮಾತನಾಡಬೇಕು. ಆದರೆ ಫೋನಿನಲ್ಲಿ ಮಾತನಾಡುವುದು ಬೇಡ ಎಂದು ಹೇಳಿ ತಕ್ಷಣ ಸಿದ್ದರಾಮಯ್ಯ ಅವರ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಸಿಟ್ಟಾದ ಸಿದ್ದರಾಮಯ್ಯ, ಏನಾದರೂ ಮಾಡಿಕೊಳ್ಳಲಿ ನಡೆಯಿರಿ ಎಂದು ಬೇಸರದಿಂದ ಬೆಳಗಾವಿ ವಿಮಾನ ನಿಲ್ದಾಣದ ಕಡೆ ಹೆಜ್ಜೆ ಹಾಕಿದರು ಎನ್ನುವ ವಿಚಾರ ತಿಳಿದು ಬಂದಿದೆ.
ಇತ್ತ ನೀವು ಚುನಾವಣಾ ಸಿದ್ಧತೆ ಮಾಡಿಕೊಳ್ಳಿ. ನಾನು ಉಪ ಮುಖ್ಯಮಂತ್ರಿಯಾಗಿಯೇ ಗೋಕಾಕ್ಗೆ ಬರುತ್ತೇನೆ. ಮದ್ಯಂತರ ಚುನಾವಣೆಗೆ ಸಿದ್ಧವಾಗುತ್ತದೆ ಎಂದು ಆಪ್ತನಿಗೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv