ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ತಮ್ಮ ಬಲ ಪ್ರದರ್ಶನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರು ಆಗಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಸರ್ಕಾರದಲ್ಲಿ ಅಸಮಾಧಾನ ಹೆಚ್ಚಾಗುವ ಕುರಿತು ಸಿಎಂ ಕುಮಾರಸ್ವಾಮಿ ಅವರು `ಕೈ’ ಹೈಕಮಾಂಡ್ ದೂರು ನೀಡಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಒಂದೊಮ್ಮೆ ಹೈಕಮಾಂಡ್ ತಮ್ಮ ಮೇಲೆ ಸವಾರಿ ಮಾಡಲು ಮುಂದಾದರೆ ಅಹಿಂದ ಅಸ್ತ್ರ ಪ್ರಯೋಗಕ್ಕೆ ಮಾಡುವ ಚಿಂತನೆಯಲ್ಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಪ್ರಮುಖವಾಗಿ ಅಹಿಂದ ವರ್ಗದಲ್ಲಿ ಗುರುತಿಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಲಿಂಗಾಯತ ಬೆಂಬಲಿತ ಶಾಸಕರಾದ ಅಥಣಿ ಕ್ಷೇತ್ರದ ಮಹೇಶ್ ಕಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದ ಶ್ರೀಮತ ಪಾಟೀಲ್, ಬಸವಕಲ್ಯಾಣ ಶಾಸಕ ಬಿ.ನಾರಾಯಣ, ಬಳ್ಳಾರಿ ಕ್ಷೇತ್ರದ ನಾಗೇಂದ್ರ, ರಾಯಚೂರು ಸಂಸದ ಬಿ.ವಿ.ನಾಯಕ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಮಾಜಿ ಸಚಿವ ಆಂಜನೇಯ, ಸೇರಿದಂತೆ ಮೇಲ್ಮನೆ ಸದಸ್ಯರಾದ ಧರ್ಮಸೇನಾ, ಐವಾನ್ ಡಿಸೋಜಾ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿಸಿರುವ ಸಿದ್ದರಾಮಯ್ಯ ಅವರ ಚಿಕಿತ್ಸೆ ಇಂದು ಮುಕ್ತಾಯವಾಗಲಿದ್ದು, ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಇನ್ನು ಜೂನ್ 30 ರಂದು ಸಮನ್ವಯ ಸಮಿತಿ ಸಭೆ ನಡೆಯಲಿದ್ದು. ಸಿಎಂ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮುಖಾಮುಖಿ ಆಗಲಿದ್ದಾರೆ. ಬಜೆಟ್ ಪೂರ್ವಭಾವಿ ಚರ್ಚೆ ಹಾಗೂ ಸಾಮನ್ಯ ಕನಿಷ್ಟ ಕಾರ್ಯಕ್ರಮದ ರೂಪುರೇಷೆ ಅಂತಿಮ ಪಡಿಸಲು ವೇದಿಕೆ ಸಿದ್ಧವಾಗಿದೆ.
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಭೇಟಿಗೂ ಮುನ್ನ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರ ಭೇಟಿಯಲ್ಲಿ ಯಾವುದೇ ವಿಶೇಷತೆಯಿಲ್ಲ. ಆರೋಗ್ಯ ವಿಚಾರಿಸಲು ಧರ್ಮಸ್ಥಳದ ಶಾಂತಿವನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಮಂಗಳೂರು ವಿಮಾನ ನಿಲ್ದಾಣದ ಲಾಂಜ್ ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ ಆಗಮಿಸಿದ್ದ ಶಾಸಕರು, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರ ಜೊತೆ ಕೆಲ ಹೊತ್ತು ಗುಪ್ತ ಮಾತುಕತೆ ನಡೆಸಿದರು. ಬಳಿಕ ಹೊರಬಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಜೆಟ್ ನಿರ್ಧಾರವನ್ನು ನಮ್ಮ ನಾಯಕ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು, ಅವರ ನಿರ್ಧಾವರನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದರು.