ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ ಹೈಕಮಾಂಡ್ ವಿಶ್ವಾಸ ಕಳೆದು ಕೊಳ್ಳುತ್ತಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ನೀವೇ ವಹಿಸಿಕೊಳ್ಳಿ, ನೀವೇ ಮುನ್ನಡೆಸಿ ಎಂದು ಮಾತು ಮಾತಿಗೂ ಸಿದ್ದರಾಮಯ್ಯರನ್ನು ನಂಬುತ್ತಿದ್ದ ಹೈಕಮಾಂಡ್ಗೆ ಈಗ ಸಿದ್ದರಾಮಯ್ಯ ಮೇಲೆ ನಂಬಿಕೆ ಉಳಿದಿಲ್ವಾ? ಹೀಗೊಂದು ಚರ್ಚೆ ದೆಹಲಿ ಮಟ್ಟದಲ್ಲಿ ಕೇಳಿ ಬಂದಿದೆ.
ಕಳೆದ 6 ವರ್ಷದಿಂದ ಎಲ್ಲದಕ್ಕೂ ಮಣೆ ಹಾಕಿದ್ದ ಹೈಕಮಾಂಡ್ಗೆ ಸಿದ್ದರಾಮಯ್ಯ ಮೇಲೆ ಮೊದಲಿದ್ದ ನಂಬಿಕೆ ಈಗ ಉಳಿದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಂತೆ ಈ ಬಾರಿ ಅಧಿವೇಶನದಲ್ಲೂ `ನಾನು ವಿರೋಧ ಪಕ್ಷದ ನಾಯಕ’ ಅಂದಿದ್ದ ಸಿದ್ದರಾಮಯ್ಯಗೆ ದೆಹಲಿಯಿಂದ ತಮ್ಮ ಪರವಾಗಿಯೇ ಒಲವು ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಹುಸಿಯಾಗುತ್ತಿದೆ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರು ಅರ್ಹರು ಅನ್ನೋ ವರದಿ ನೀಡುವಂತೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ಗೆ ಹೈಕಮಾಂಡ್ ಸೂಚಿಸಿದೆ. ರಾಜ್ಯಕ್ಕೆ ಆಗಮಿಸಲಿರುವ ಆಜಾದ್ ವರದಿ ಆಧರಿಸಿ ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಮಾಡಲಿದೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರೇ ಕಾರಣ ಅನ್ನೋ ಆರೋಪವನ್ನ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗಿ ಸಿದ್ದರಾಮಯ್ಯ ಪರ್ಯಾಯ ನಾಯಕನಿಗೆ ಶೋಧ ಮಾಡುತ್ತಿದ್ದು, ಈ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಆಜಾದ್ ಏನಾದರೂ ಡಿಕೆಶಿ ಪರ ವರದಿ ಕೊಟ್ಟರೆ ಡಿ.ಕೆ ಶಿವಕುಮಾರ್ ಅವರಿಗೆ ವಿಪಕ್ಷ ಸ್ಥಾನ ಬಿಟ್ಟುಕೊಡಬೇಕಿದೆ.