ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಿದೆ. ದೇಶದ ಅತಿ ದೊಡ್ಡವಾಗಿರುವ ಪಕ್ಷದ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಗರಂ ಆಗಿದ್ದಾರೆ.
ಸರೋಜಿನಿ ಮಹಿಷಿ ವರದಿ ಜಾರಿ ಮಾಡುವ ಕುರಿತು ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಈ ವೇಳೆ ದೆಹಲಿ ಚುನಾವಣೆ ಕುರಿತು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಈ ಕುರಿತು ಪ್ರತಿಕ್ರಿಯೆ ಬೇಕಾದರೆ ಕಾಂಗ್ರೆಸ್ ಕಚೇರಿಗೆ ಬನ್ನಿ ಎಂದು ಮುಂದಕ್ಕೆ ನಡೆದರು.
ದೆಹಲಿಯಲ್ಲಿ ಎಷ್ಟು ಸ್ಥಾನ ಬಂದಿದೆ ಎಂಬುವುದು ನನಗೆ ಗೊತ್ತಿದೆ. ನಾವೇನು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ವಾ? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.
ಡಾ. ಸರೋಜಿನಿ ಮಹಿಷಿ ಅವರ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಹಮ್ಮಿಕೊಂಡಿರುವ ಹೋರಾಟದಲ್ಲಿ ಮಾಜಿ ಸಿದ್ದರಾಮಯ್ಯ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು. ಡಾ.ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಮಾಡ್ತಿರುವ ಹೋರಾಟ 100 ದಿನಕ್ಕೆ ಕಾಲಿಟ್ಟಿದೆ. 100 ದಿನ ಹೋರಾಟದಲ್ಲಿ ಭಾಗವಹಿಸಿದ ಅವರು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ನಮ್ಮ ಸರ್ಕಾರ ಇದ್ದಾಗಲೇ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ನವರು ಪರಿಷ್ಕೃತ ವರದಿ ಸಲ್ಲಿಸಿದ್ದರು. ವರದಿ ಜಾರಿಗೆ ತರುವಷ್ಟರಲ್ಲಿ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು. ಆದ್ದರಿಂದ ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ. ವಿಧಾನಸೌಧದಲ್ಲೂ ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದರು.