ಬೆಂಗಳೂರು: ಮಂಡ್ಯ ಬಂಡಾಯ ಕೈ ನಾಯಕರನ್ನು ಮನವೊಲಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಮಂಡ್ಯ ನಾಯಕರ ಸಭೆಯನ್ನು ಸಿದ್ದರಾಮಯ್ಯ ಕರೆದಿದ್ದಾರೆ.
ಮಂಡ್ಯದಲ್ಲಿ ಮೈತ್ರಿಧರ್ಮ ಪಾಲನೆಗಾಗಿ ಇಂದು ಮಾಜಿ ಶಾಸಕ ಚಲುವರಾಯಸ್ವಾಮಿ ಜೊತೆ ಅಂತಿಮ ಹಂತದ ಮಾತುಕತೆಯನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಇಂದು ಸಂಧಾನ ಸಕ್ಸಸ್ ಆಗದಿದ್ರೆ ಸ್ವತಃ ಸಿದ್ದರಾಮಯ್ಯರಿಗೆ ಸಂಕಷ್ಟ ಎದುರಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಪರವಾಗಿ ನಿಲ್ಲದಿದ್ದರೆ, ಅದರ ನೇರ ಪರಿಣಾಮ ಮೈಸೂರಿನ ಮೇಲೆ ಬೀರಲಿದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಹೀಗಾಗಿ ಇಂದು ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರ ಮನವೊಲಿಸುವ ಕೆಲಸವನ್ನ ಸಿದ್ದರಾಮಯ್ಯನವರು ಮಾಡಲಿದ್ದಾರೆ. ಒಂದು ವೇಳೆ ಚಲುವರಾಯಸ್ವಾಮಿ ಮೈತ್ರಿ ಧರ್ಮ ಪಾಲನೆಗೆ ವಿರೋಧಿಸಿದ್ರೆ, ಕಾಂಗ್ರೆಸ್ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಮಂಡ್ಯ ಕೈ ಕಾರ್ಯಕರ್ತರು ಕಣ್ಣಿದೆ.