ಬೆಂಗಳೂರು: ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿದ್ರಲ್ಲ ಅದಕ್ಕೆ ಸರ್ಕಾರ ಏನ್ ಕ್ರಮ ಕೈಗೊಂಡಿದೆ?. ಈ ವಿವಾದ ಆರ್ಎಸ್ಎಸ್ನ ಕುತಂತ್ರ. ಈಶ್ವರಪ್ಪ ಅವರ ಕೈನಲ್ಲಿ ಆರ್ಎಸ್ಎಸ್ ಅವರು ಮಾಡಿಸಿರೋದು ಈ ಪೆದ್ದ ಮಾಡಿಬಿಟ್ಟಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆರ್ಎಸ್ಎಸ್ ಅವರಿಗೆ ತ್ರಿವರ್ಣ ಧ್ವಜ ಅಂದ್ರೆ ಗೌರವ ಇಲ್ಲ. ರಾಷ್ಟ್ರ ಧ್ವಜ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿ ತುಂಬಿದೆ. ಇದು 130 ಕೋಟಿ ಜನರ ಭಾವನೆಗಳ ವಿಚಾರ. ದೇಶದ ಸ್ವಾಭಿಮಾನವಿದು. ಅದಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ
ಧ್ವಜ ವಿವಾದದ ಬಗ್ಗೆ ಅಸೆಂಬ್ಲಿ ನಡೆಯುವ ತನಕ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಅಸೆಂಬ್ಲಿ ಮುಂದೂಡಿದ್ರೆ ನಾವು ಕಾಲ್ ಆಫ್ ಮಾಡಿ ಜನರ ಬಳಿ ಹೋಗ್ತೀವಿ. ಇದು ದೇಶದ ಸ್ವಾಭಿಮಾನದ ವಿಚಾರ. ಇಂತಹ ಅವಮಾನ ಮಾಡಿದವರು ಸರ್ಕಾರಲ್ಲಿ ಇರುವುದು ಹೇಗೆ. ಸಂವಿಧಾನಕ್ಕೆ ಗೌರವ ಕೊಡದೇ ಇರುವವರು ಮಂತ್ರಿಯಾಗಿ ಹೇಗೆ ಇರುತ್ತಾರೆ?. ಡಿಕೆ ಶಿವಕುಮಾರ್ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿಲ್ಲ. ಇದು ಬಿಜೆಪಿ ಹೇಳುತ್ತಿರುವ ಸುಳ್ಳು. ಈ ವಿವಾದದ ದಾರಿ ತಪ್ಪಿಸಲು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದರು. ಇದನ್ನೂ ಓದಿ: ನಲಪಾಡ್ ವಿರುದ್ಧ ಎಫ್ಐಆರ್ ದಾಖಲು
ಆರ್ಎಸ್ಎಸ್ ಅವರಿಗೆ ಕೇಸರಿ ಧ್ವಜದ ಮೇಲೆ ಗೌರವ ಇಲ್ಲ. ಇದು ಸಂಪೂರ್ಣ ಆರ್ಎಸ್ಎಸ್ ಕುತಂತ್ರ. ಸೋಮವಾರದ ದಿನ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಸದನದಲ್ಲಿ ಈ ವಿಚಾರ ಚರ್ಚೆಗೆ ಕೊಟ್ಟು ಈಶ್ವರಪ್ಪ ಅವರ ರಾಜೀನಾಮೆ ಕೊಟ್ಟಿದ್ದರೆ, ಮುಂದೆ ಹಲವು ವಿಚಾರಗಳನ್ನು ಮಾತನಾಡಬಹುದಿತ್ತು. ಇದನ್ನು ಬಿಟ್ಟು ಸರ್ಕಾರದ ಉತ್ತರ ಕೇಳ್ಕೊಂಡು ಕೂರೋಕಾಗತ್ತಾ? ಈ ಎಲ್ಲದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.