ಧಾರವಾಡ: ಸಮ್ಮಿತ್ರ ಸರ್ಕಾರವನ್ನು ಪತನ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ಲಾನ್ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ದೋಸ್ತಿ ಸರ್ಕಾಕ್ಕೆ ವಿಲನ್ ಅಂತ ಯಾರಾದರೂ ಇದ್ದರೇ ಅದು ಸಿದ್ದರಾಮಯ್ಯ ಅವರೇ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.
ಕುಂದಗೋಳ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೋಸ್ತಿ ಸರ್ಕಾರಕ್ಕೆ ವಿಲನ್ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಸಮ್ಮಿಶ್ರ ಸರ್ಕಾರವನ್ನು ಅವರೇ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ 20 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಳ ಹೊಡೆತಗಳು ಬಹಳ ಇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ ಎಂದರು.
ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ವಿಷಯಗಳು ಸಿದ್ಧರಾಮಯ್ಯನವರ ಕುಮ್ಮಕ್ಕಿಲ್ಲದೇ ಆಗಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಯಾವುದೇ ಸ್ಥಾನಮಾನದಲ್ಲಿರುವುದು ಅವರಿಗೆ ಇಷ್ಟವಿಲ್ಲ. ಸಿದ್ದರಾಮಯ್ಯನವರೇ ಸಮ್ಮಿಶ್ರ ಸರ್ಕಾರ ಬೀಳಿಸುವ ಕುತಂತ್ರ ನಡೆಸಿದ್ದಾರೆ. ಸಿದ್ಧರಾಮಯ್ಯ ಕುತಂತ್ರ ಮಾಡುತ್ತಾರೆ ಬಳಿಕ ಬಿಜೆಪಿ ಮೇಲೆ ಆಪಾದನೆ ಮಾಡುತ್ತಾರೆ. ಹೀಗಾಗಿ ದೋಸ್ತಿ ನಾಯಕರು ಅವರವರೇ ಹೊಡೆದಾಡಿಕೊಂಡು ಬಿಜೆಪಿಯತ್ತ ಬರುತ್ತಾರೆ ಎಂದು ಜೋಶಿ ಹೇಳಿದರು.