-ಡಿಕೆಶಿ ಮತ್ತು ಎಂಬಿಪಿ ನಾಟಕ ಮಾಡುತ್ತಿದ್ದಾರೆ
ದಾವಣಗೆರೆ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಗೆಲ್ಲೋದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟ ಇಲ್ಲಾ, ಅವರನ್ನು ಸೋಲೀಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಜಗಳೂರುನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಪರವಾಗಿ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ದೇವೇಗೌಡರವರು ಹಾವು ಮುಂಗುಸಿಯಂತೆ ಇದ್ದವರು. ಈಗ ಒಂದಾಗಿದ್ದಾರೆ. ಹಳೇ ದ್ವೇಷ ತೀರಿಸಿಕೊಳ್ಳಲು ಸಿದ್ದರಾಮಯ್ಯರಿಗೆ ಇದೊಂದು ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ಈಗ ಚುನಾವಣೆಯಲ್ಲಿ ಇಡೀ ಕುಟುಂಬವನ್ನ ಸೋಲಿಸೋಕೆ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ನಾಟಕ ಮಾಡುತ್ತಿದ್ದಾರೆ. ಅತ್ತ ಧರ್ಮದ ವಿಚಾರಲ್ಲಿ ಡಿ.ಕೆ.ಶಿವಕುಮಾರ್ ಒಂದು ರೀತಿ ಹೇಳಿಕೆ ಕೊಡ್ತಾನೆ. ಇತ್ತ ಪಾಟೀಲ್ ಇನ್ನೊಂದು ತರ ಹೇಳಿಕೆ ಕೊಡ್ತಾನೆ ಎಂದು ಇಬ್ಬರ ವಿರುದ್ಧವೂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಬಳಿಕ ತಮ್ಮ ಪಕ್ಷದ ಬಗ್ಗೆ ಮಾತನಾಡುತ್ತ, ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.