ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಬೆಂಕಿಯ ಮೇಲೆ ನಡೆದು, ಯಶಸ್ವಿ ಸರ್ಕಾರವನ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ, ಚಿತ್ರನಟಿ ಜಯಮಾಲಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವಲ್ಲಿ ಕಾರ್ಯತಂತ್ರ ಕುರಿತಂತೆ ಸೋಮವಾರ ನಗರದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಅಂತ ಕಿವಿ ಮಾತು ಹೇಳಿದ್ರು.
ಇದೇ ವೇಳೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೂಡ ಸಭೆಯಲ್ಲಿ ವಿವರಿಸಿದ್ರು. ಸಾಕಷ್ಟು ಜನ ಮೆಚ್ಚುವಂತಹ ಯೋಜನೆಗಳನ್ನ ಜನರಿಗೆ ಮುಟ್ಟಿಸಿ ಯಶಸ್ವಿಯಾದ ನಮ್ಮ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದೆ ಅಧಿಕಾರವನ್ನ ನಡೆಸಿದೆ ಎಂದರು.
ಮಹಾದಾಯಿ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳಕಳಿ ಇದೆ. ನಮ್ಮ ಸರ್ಕಾರ ಮಹದಾಯಿ ಹೋರಾಟದ ಪರವಿದ್ದು, ಹೋರಾಟಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವವರಿಗೆ ಸಾಯುವಾಗ ನೀರು ಸಿಗುವುದಿಲ್ಲ ಎಂಬಂತೆ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.