ದಾವಣಗೆರೆ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟದ ಮೇಲೆ ಹಿಡಿತ ಇರಲಿಲ್ಲ ಹೀಗಾಗಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವೀರಶೈವ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಕುರುಬ ಸಮುದಾಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಅಧಿಕಾರಿ ನಡೆಸಿದಾಗ ಮಂತ್ರಿ ಮಂಡಲದ ಮೇಲೆ ಹತೋಟಿ ಹೊಂದಿರಲಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗದಿರಲು ಅದೇ ಪ್ರಮುಖ ಕಾರಣ. ಮಂತ್ರಿ ಮಂಡಲದ ಮೇಲೆ ಹತೋಟಿ ಹೊಂದಿದ್ದರೆ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕುರುಬ ಸಮಾಜದ ಜನ ಒಗ್ಗಟ್ಟಿನಿಂದ ಅವರಿಗೆ ಮತ ಚಲಾಯಿಸಲಿಲ್ಲ. ಕೆಲವರು ಮತ ಚಲಾಯಿಸಿದರೂ, ಇನ್ನೂ ಕೆಲವರು ಕೈಕೊಟ್ಟರು. ಇದು ಸಹ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದಿರಲು ಕಾರಣವಾಗಿದೆ. ಆದರೆ ಈಗ ನಿರಾಸೆ ಬೇಡ. ಅವರನ್ನು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾನ್ನಾಗಿ ಮಾಡೋಣ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಎಂದು ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews