ರಾಯಚೂರು: ಅಣ್ಣತಮ್ಮಂದಿರಂತೆ ಇರುವ ಜನರಲ್ಲಿ ಈ ತರದ ಭಾವನೆ ತಂದು ಕೆರಳಿಸಿ, ಮತೀಯ ಗಲಭೆಗೆ ಅವಕಾಶ ಕೊಡಬಾರದು ಎಂದು ಹಿಜಬ್ ಕುರಿತಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ. ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ ಎಂದು ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಈ ಬಗ್ಗೆ ಮಂತ್ರಾಲಯದಲ್ಲಿ ಮಾತನಾಡಿದ ಮಂತ್ರಾಲಯದ ಶ್ರೀಗಳು, ಎಲ್ಲಿ ಏನೇ ನಡೆದರು ಧಾರ್ಮಿಕ ಸಂಘ ಸಂಸ್ಥೆಗಳು, ಸ್ವಾಮೀಜಿಗಳ ಮೇಲೆ ಮಾತನಾಡುವುದು ಫ್ಯಾಶನ್ ಆಗಿದೆ. ಮಠಾಧಿಪತಿಗಳು ಶಾಲೆಗೆ ಹೋಗಿ ಓದುವಂತ ವಿದ್ಯಾರ್ಥಿಗಳು ಅಲ್ಲ. ಶಾಲಾ ಸಮವಸ್ತ್ರ ನೀತಿಯಲ್ಲಿ ಮಠಾಧಿಪತಿಗಳು ಬರುವುದಿಲ್ಲ. ಸುಮ್ಮನೆ ಮಠಾಧಿಪತಿಗಳನ್ನು ಈ ವಿಷಯಕ್ಕೆ ಎಳೆದು ತರುವುದನ್ನು ಖಂಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ
ನ್ಯಾಯಾಲಯ ಸುಧೀರ್ಘವಾಗಿ ಪರಿಶೀಲಿಸಿ ತೀರ್ಪನ್ನು ನೀಡಿದೆ, ಈ ತೀರ್ಪನ್ನು ಎಲ್ಲರೂ ಗೌರವಿಸಬೇಕು. ತಲೆಮೇಲೆ ಬಟ್ಟೆ ಹಾಕುವುದು ಇಲ್ಲಿ ವಿಷಯವಲ್ಲ, ಅಧ್ಯಯನ ವೇಳೆ ಸಮವಸ್ತ್ರ ಧರಿಸಬೇಕು ಅನ್ನೋದು ತೀರ್ಪು ಎಂದಿದ್ದಾರೆ. ಇದನ್ನೂ ಓದಿ: ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು, ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ?: ಹ್ಯಾರೀಸ್
ಅಪ್ರಸ್ತುತ ವಿಷಯವನ್ನಿಟ್ಟುಕೊಂಡು ಯಾರೇ ವಿವಾದಕ್ಕೆ ಎಳೆದರೂ ಖಂಡಿಸುತ್ತೇವೆ. ವಿವಾದವನ್ನು ವಿಸ್ತರಿಸಿ ದೇಶದಲ್ಲಿ ಗಲಭೆ, ಅಶಾಂತಿ ಉಂಟು ಮಾಡುವುದು ಸರಿಯಲ್ಲ. ಹತ್ಯೆಗೆ ಒಳಗಾದ ವ್ಯಕ್ತಿ ಕುಟುಂಬಕ್ಕೆ ಪರಿಹಾರ ಧನ ನೀಡುವಾಗ ಒಂದು ಧರ್ಮಕ್ಕೆ ಹೆಚ್ಚು, ಇನ್ನೊಂದಕ್ಕೆ ಕಡಿಮೆ ಎನ್ನುವ ಪರಿಕಲ್ಪನೆ ಸರ್ಕಾರದಲ್ಲಿ ಇಲ್ಲ ಎಂದು ಮಂತ್ರಾಲಯ ಶ್ರೀಗಳು ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು..?
ಮೈಸೂರು ಜಿಲ್ಲೆಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮೂರು ದಿನಗಳಕಾಲ ನಡೆಯುತ್ತಿರುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾಮಹೋತ್ಸವಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು.
ಸ್ವಾಮೀಜಿಗಳು ಕೂಡ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ ಜನ ಬುದ್ದಿವಂತರು, ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ಹೇಳಿದ್ದರು.