ಚಿಕ್ಕಬಳ್ಳಾಪುರ: ಪಾಪ ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಏನಾಗುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸುಧಾಕರ್, ಆರ್ಎಸ್ಎಸ್ ಎಂಬುದು ಸ್ವಯಂ ಸೇವಾ ಸಂಸ್ಥೆ. ದೇಶ ಸೇವೆ ಮಾಡುವುದೇ ಅದರ ಕಾಯಕ. ಆರ್ಎಸ್ಎಸ್ ನಲ್ಲಿರುವವರು ತಮ್ಮ ಬದುಕನ್ನೇ ದೇಶ ಹಾಗೂ ಜನರ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಆರ್ಎಸ್ಎಸ್ ಬಗ್ಗೆ ಅನುಮಾನ ಇರುವವರು ಅವರ ಜೊತೆ ಒಂದು ದಿನ ಇದ್ದು ಬರಲಿ. ಅವರಿಗೆ ಜ್ಞಾನೋದಯ ಆಗುತ್ತದೆ ಎಂದು ಟೀಕಿಸಿದರು. ಇದನ್ನೂ ಓದಿ: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್
ಆರ್ಎಸ್ಎಸ್ ಟೀಕೆ ಮಾಡುವವರಿಗೆ ಅದರ ಇತಿಹಾಸ, ಚರಿತ್ರೆ ಗೊತ್ತಿಲ್ಲ. ದೀನದಯಾಳ್ ಉಪಾಧ್ಯಯ ಅವರ ಕಥೆಯನ್ನು ಓದಿದರೆ ಅರ್ಥವಾಗುತ್ತದೆ. ಆರ್ಎಸ್ಎಸ್ ಅನ್ನು ರಾಜಕರಣ ಮಾಡಬೇಡಿ. ಆರ್ಎಸ್ಎಸ್ ಇರುವುದರ ಬಗ್ಗೆ ಈ ದೇಶದ ಜನರು ಹೆಮ್ಮೆ ಪಡಬೇಕು ಎಂದು ಶ್ಲಾಘಿಸಿದರು.
ಆರ್ಎಸ್ಎಸ್ ಸಂಸ್ಥೆಯವರು ಕೋವಿಡ್ ಸಮಯದಲ್ಲಿ ಸಮಾಜಮುಖಿ ಕೆಲಸ ಮಾಡಿದ್ದಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ. ಮನೆ ಮನೆಗೆ ಹೋಗಿ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ. ಆದರೂ ಅವರು ಈ ಬಗ್ಗೆ ಪ್ರಚಾರ ಅಥವಾ ತೋರ್ಪಡಿಸಿಕೊಂಡಿಲ್ಲ ಎಂದರು.
ಆರ್ಎಸ್ಎಸ್ ಬಗ್ಗೆ ಅಪಹಾಸ್ಯ, ಟೀಕೆ ಮಾಡಿದರೆ ಅವರವರ ತನವನ್ನು ಅವರು ಕಳೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ನಾವು ಯಾವ ಧರ್ಮದವರನ್ನೂ ಓಲೈಕೆ ಮಾಡುವುದಿಲ್ಲ. ಯಾವ ಧರ್ಮದವರನ್ನೂ ತಲೆ ಮೇಲೆ ಇಟ್ಟುಕೊಳ್ಳುವುದಿಲ್ಲ. ನಮಗೆ ಎಲ್ಲಾ ಧರ್ಮದವರೂ ಸಮಾನರು. ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಕೂಡ ಸಮಾನವಾಗಿ ಕಾಣುತ್ತೇವೆ. ಅದುವೇ ಭಾರತೀಯ ಜನತಾ ಪಕ್ಷದ ವೈಶಿಷ್ಟ್ಯ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP
ಈ ವೇಳೆ ಅಲ್ಖೈದಾ ವಿಚಾರವಾಗಿ ಮಾತನಾಡಿದ ಸುಧಾಕರ್, ಅಲ್ಖೈದಾ ಮುಖ್ಯಸ್ಥನ ಹೇಳಿಕೆ ಬಗ್ಗೆ ಮಾತನಾಡುವುದು ನನ್ನ ಪ್ರಕಾರ ಅಪರಾಧ. ಅಲ್ಖೈದಾ ಎಂಬುದು ಅಂತರಾಷ್ಟ್ರೀಯ ಮಟ್ಟದ ಉಗ್ರ ಸಂಘಟನೆ. ಅಂತಹ ಸಂಘಟನೆಯವರ ಹೇಳೀಕೆಯನ್ನು ಇಡೀ ಭಾರತದ ಪ್ರತಿಯೊಬ್ಬ ಪ್ರಜೆ ಕೂಡ ಒಕ್ಕೊರಲಿನಿಂದ ಖಂಡಿಸಬೇಕು ಎಂದರು.
ಈಗಾಗಲೇ ಅಲ್ಖೈದಾ ಸಂಘಟನೆಯನ್ನು ಬಹಿಷ್ಕಾರ ಹಾಕಿದ್ದೇವೆ. ಹೀಗಾಗಿ ಅಲ್ಖೈದಾ ಮುಖ್ಯಸ್ಥನ ಹೇಳಿಕೆ ಬಗ್ಗೆ ಮಾತನಾಡುವುದು ಅಪರಾಧ. ಯಾರು ಆತ? ಅಂತರಾಷ್ಟ್ರೀಯ ಮಟ್ಟದ ಉಗ್ರ, ಮುಗ್ದ ಜನರ ಬಲಿ ಭಯೋತ್ಪಾದಕ. ಅಂತಹ ಭಯೋತ್ಪಾದಕ ಸಂಸ್ಥೆ ಹಾಗೂ ಆತನ ಹೇಳಿಕೆ ಬಗ್ಗೆ ಮಾತನಾಡೋದು ಸರಿ ಅಲ್ಲ ಎಂದರು.