ಬೆಂಗಳೂರು: ಜಂಟಿ ರಥಯಾತ್ರೆಗೆ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(DK Shivakumar) ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಷ್ಠೆಯ ಕದನಕ್ಕೂ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್(Congress High Command) ಮುಂದಾಗಿದೆ. ಜಿಂದಾಬಾದ್ ಗಿರಾಕಿಗಳಿಗೆ ಕಡಿವಾಣ ಹಾಕುವಂತೆ ಖಡಕ್ ಸೂಚಿಸಿದೆ.
ಸಿದ್ದರಾಮಯ್ಯ, ಶಿವಕುಮಾರ್ ಪರವಾಗಿ ಯಾರು ಘೋಷಣೆ ಕೂಗದಂತೆ ನೋಡಿಕೊಳ್ಳಬೇಕು. ಕೇವಲ ಪಕ್ಷಕ್ಕೆ ಜೈಕಾರ ಮೊಳಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಕರ್ನಾಟಕ, ಮಹಾ ಸಿಎಂ ಜೊತೆ ಶಾ ಚರ್ಚೆ – ಶೀಘ್ರವೇ ತಟಸ್ಥ ಸಮಿತಿ ರಚನೆ
ರಥಯಾತ್ರೆ ಹೋದ ಕಡೆ ವೈಯಕ್ತಿಕ ಜೈಕಾರಗಳು ಮೊಳಗಿದರೆ ಮುಲಾಜಿಲ್ಲದೇ ಜಿಲ್ಲಾಧ್ಯಕ್ಷರು, ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಈ ಮಧ್ಯೆ, ಪ್ರತ್ಯೇಕ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ರಥಯಾತ್ರೆಗೆ ಬ್ರೇಕ್ ಅಂತಾ ಯಾರು ಹೇಳಿದ್ದು? ಎಲ್ಲಾ ನೀವೇ ಹುಟ್ಟು ಹಾಕ್ತೀರಲ್ರೀ ಎಂದಿದ್ದಾರೆ. ಮೊದಲು ಜಂಟಿಯಾಗಿ ನಂತರ ಎರಡು ತಂಡಗಳಾಗಿ ಪ್ರಚಾರ ಮಾಡುತ್ತೇವೆ. ಇದಕ್ಕೆ ಸಮಯದ ಅಭಾವ ಕಾರಣ ಅಷ್ಟೇ. ಬೇರೇ ಯಾವುದೇ ಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.