ಬೆಂಗಳೂರು: ಕರ್ನಾಟಕದ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದು ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ ಮಂಡ್ಯದ ಚುನಾವಣೆ ಕಾವು ಮಾತ್ರ ಇದೂವರೆಗೂ ಕಡಿಮೆ ಆಗಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬಂಡಾಯ ನಾಯಕರು ಹಾಗೂ ದಳಪತಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಎರಡೂ ದೋಸ್ತಿಗಳ ಒಬ್ಬರ ಮೇಲೊಬ್ಬರ ಆರೋಪಗಳು ಮಾಡುತ್ತಾ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡುತ್ತಿದ್ದಾರೆ.
ಕಳೆದೆರಡು ದಿನಗಳಿಂದ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಮತ್ತು ಜೆಡಿಎಸ್ ಶಾಸಕರಾದ ಸುರೇಶ್ ಗೌಡ ಹಾಗೂ ನಾರಾಯಣಗೌಡರ ನಡುವೆ ಶೀತಲ ಸಮರವೇ ನಡೆದಿದೆ. ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಲು ಸುರೇಶ್ ಗೌಡ ಮತ್ತು ನಾರಾಯಣಗೌಡ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆಂಬ ಅನುಮಾನ ಸಿದ್ದರಾಮಯ್ಯರಿಗೆ ಬಂದಿದೆ ಅಂತೆ. ಚುನಾವಣಾ ಫಲಿತಾಂಶದ ಬಳಿಕ ಏನು ಬೇಕಾದರೂ ಆಗಬಹುದು. ಇಲ್ಲಿದ್ದರೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲೇಬೇಕಾಗುತ್ತದೆ. ಹಾಗಾಗಿ ಫಲಿತಾಂಶ ಬರೋವರೆಗೂ ಮಂಡ್ಯ ಅತೃಪ್ತ ಕಾಂಗ್ರೆಸ್ ಮುಖಂಡರಿಗೆ ವಿದೇಶ ಪ್ರವಾಸಕ್ಕೆ ತೆರಳುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಬರೋವರೆಗೂ ತಾಳ್ಮೆ ಕಾಯ್ದುಕೊಳ್ಳಲು ಇರುವಂತೆ ಸಿದ್ದರಾಮಯ್ಯನವರು ಸೂಚನೆ ನೀಡಿದ ಬೆನ್ನಲ್ಲೆ ಚಲುವರಾಯಸ್ವಾಮಿ ಮೂರ್ನಾಲ್ಕು ದಿನಗಳವರೆಗೆ ದುಬೈ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.