ಬೆಂಗಳೂರು: ಬಹುಮತ ಇಲ್ಲ ಅಂದರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಆಟ ಆಡುತ್ತಿದ್ದಾರೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸು ಹಾಳಾಗುತ್ತಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ಸಮಯವನ್ನು ನಿಗದಿ ಮಾಡಿದ್ದಾರೆ. ಸಂಜೆ 5 ರಿಂದ 6ಕ್ಕೆ ಬಹುಮತವನ್ನು ಕೇಳುತ್ತಾರೆ. ಮೈತ್ರಿಗೆ ಬಹುಮತ ಇಲ್ಲ ಅಂದರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಆಟ ಆಡುತ್ತಿದ್ದಾರೆ. ದೋಸ್ತಿ ಉಳಿಸಿಕೊಳ್ಳಲು ಹೋಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಸಿಎಂ ಅಧಿಕಾರಕ್ಕೆ ಅಂಟಿಕೂರಲ್ಲ ಎನ್ನುತ್ತಾರೆ. ಆದರೂ ರಾಜೀನಾಮೆ ಕೊಡದೆ ಹಾಗೇ ಇದ್ದಾರೆ. ಈ ಹಿಂದೆ ದೇವೇಗೌಡ ಸಿದ್ದರಾಮಯ್ಯರನ್ನ ಉಚ್ಚಾಟನೆ ಮಾಡಿದ್ದರು. ಡಿಕೆ ಶಿವಕುಮಾರ್ರನ್ನ ಮಂತ್ರಿವರ್ಗಕ್ಕೆ ಸೇರಲು ದೇವೇಗೌಡರು ಬಿಟ್ಟಿರಲಿಲ್ಲ ಎಂದು ಆರೋಪಿಸಿದರು. ಬಳಿಕ ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಸಿದ್ದರಾಮಯ್ಯರಿಗೆ ವೈಯಕ್ತಿಕ ವರ್ಚಸ್ಸಿದೆ. ಆದ್ದರಿಂದ ಅವರು ಸರ್ಕಾರದ ಪರವಾಗಿ ನಿಲ್ಲಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕಿದೆ. ಸರ್ಕಾರ ಇರೋದು ಸಿದ್ದರಾಮಯ್ಯರಿಗೂ ಇಷ್ಟವಿಲ್ಲ. ಸ್ಪೀಕರ್ ಕುಮಾರಸ್ವಾಮಿ ತರ ವಚನಭ್ರಷ್ಟರಾಗುವುದಿಲ್ಲ. ಇಂದು ಸಂಜೆ 6 ಗಂಟೆ ಒಳಗಡೆ ಈ ಸರ್ಕಾರ ಪತನವಾಗತ್ತೆ ಎಂದು ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.