ಉಡುಪಿ: ಪೇಜಾವರಶ್ರೀ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ತುಮಕೂರು ಸಿದ್ದಗಂಗಾ ಮಠಾಧೀಶ ಸಿದ್ದಲಿಂಗಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೇಜಾವರಶ್ರೀ ಕನ್ನಡ ನಾಡಿನ ಹೆಮ್ಮೆಯ ಸಂತ. ಶ್ರೀಗಳ ಆರೋಗ್ಯ ಶೀಘ್ರ ಸುಧಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಪೇಜಾವರಶ್ರೀಗಳು ಸಮಾಜದ ಎಲ್ಲರ ಪ್ರೀತಿಗೆ ಪಾತ್ರರು. ಸಂಘಟನಾತ್ಮಕವಾಗಿ ದೇಶಕ್ಕೆ ಶಕ್ತಿ ಕೊಟ್ಟವರು. ಶ್ರೀಗಳ ನಿರಂತರ ಚಟುವಟಿಕೆ ನಮ್ಮ ಊಹೆಗೂ ಮೀರಿದ್ದು ಎಂದು ಪೇಜಾವರಶ್ರೀಗಳನ್ನು ಶ್ಲಾಘಿಸಿದರು.
ವಿಶ್ವೇಶತೀರ್ಥ ಸ್ವಾಮೀಜಿಗಳು ವೈಯಕ್ತಿಕ ಆರೋಗ್ಯಕ್ಕೆ ಗಮನವೇ ಕೊಟ್ಟಿಲ್ಲ. ದೇಶಕ್ಕಾಗಿ ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟವರು. ಕೆಎಂಸಿ ವೈದ್ಯರು ವಿಶೇಷ ಕಾಳಜಿ ವಹಿಸಿದ್ದಾರೆ. ಪೇಜಾವರ ಕಿರಿಯ ಶ್ರೀಗಳು ಆಸ್ಪತ್ರೆಯಲ್ಲಿ ಹಿರಿಯ ಶ್ರೀಗಳ ಜೊತೆಗೆ ಇದ್ದು ಕಾಳಜಿ ವಹಿಸಿದ್ದಾರೆ. ಶ್ರೀಗಳು ಬೇಗ ಗುಣಮುಖರಾಗಿ ಮಠಕ್ಕೆ ವಾಪಸಾಗುವಂತೆ ಆಗಲಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾರೈಸಿದ್ದಾರೆ.