ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಠದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಸಿದ್ದಗಂಗಾ ಶ್ರೀ ನಂಗೆ ಎಷ್ಟು ವಯಸ್ಸಾಯ್ತು ಎಂದು ಪ್ರಶ್ನಿಸಿದ್ದಾರೆ. ಆಗ ಕಿರಿಯ ಶ್ರೀ 111 ಎಂದಾಗ ಬಹಳ ಆಯ್ತು ಎಂದು ನಡೆದಾಡುವ ದೇವರು ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು. ಡಿಸಿಎಂ ಶ್ರೀಗಳ ಆರೋಗ್ಯ ವಿಚಾರಿಸಿ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕೋ, ಬೇಡ್ವೋ ಎನ್ನುವುದನ್ನು ವೈದ್ಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತಾಡಿದರ ಅವರು, ಶ್ರೀಗಳು ನನ್ನ ಜೊತೆ ಮಾತಾಡಿದ್ರು. ಯಾವಾಗ ಬಂದ್ರಿ, ಚೆನ್ನಾಗಿದ್ದೀರಾ ಅಂತ ಕೇಳಿದ್ರು. ಕಿರಿಯ ಶ್ರೀಗಳ ಬಳಿ ತಮಗೆ ಎಷ್ಟು ವಯಸ್ಸಾಯ್ತು ಅಂತ ಪ್ರಶ್ನಿಸಿದ್ರು. ಆಗ ಕಿರಿಯ ಶ್ರೀಗಳು 111 ವರ್ಷ ಅಂದ್ರು. ಅದಕ್ಕೆ ಬಹಳ ಆಯ್ತು, ಬಹಳ ಆಯ್ತು ಅಂದ್ರು. ಶ್ರೀಗಳು ಎಂದಿನಂತೆ ಲವಲವಿಕೆಯಿಂದ ಮಾತನಾಡಿದ್ದಾರೆ ಅಂತ ಪರಮೇಶ್ವರ್ ಹೇಳಿದ್ದಾರೆ.
ಸಿದ್ದಗಂಗ ಶ್ರೀ ಅವರನ್ನು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡಿದೆ. ನಡೆದಾಡುವ ದೇವರು ಚೇತರಿಸಿಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳು ಆರೋಗ್ಯರಾಗಿದ್ದಾರೆಂದು ಮಠದ ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್, ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಂಡುಬಂದಿದ್ದು, ಜ್ವರದಿಂದ ಬಳಲುತ್ತಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಏನು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿ ಸ್ವಾಮೀಜಿ ಕೂಡ ಆರಾಮಗಿದ್ದಾರೆ. ಪೂಜೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.
2018 ಜನವರಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಅಂದು ಅಳವಡಿಸಿದ್ದ ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv