ಸಕಲ ಜೀವಗಳಿಗೂ ಪ್ರೀತಿಯ ಧಾರೆ ಎರೆದ ವಾತ್ಸಲ್ಯ ಮೂರ್ತಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚು ಮೆಚ್ಚು. ಶ್ರೀಗಳ ಶರಣ ವಿಚಾರಧಾರೆಯಲ್ಲಿ ಜಾತಿ ಮತಗಳ ಜಂಜಡವಿಲ್ಲ, ಪಂಥ ಪಂಗಡಗಳ ಪ್ರವರವಿಲ್ಲ, ಮೇಲು ಕೀಳುಗಳ ಮಾಲಿನ್ಯವಿಲ್ಲ, ಮಡಿ ಮೈಲಿಗೆಗಳ ಮೀಸಲಿಲ್ಲ, ಅಂತಸ್ತು ಅಧಿಕಾರಗಳ ಅವಿವೇಕವಿಲ್ಲ.
ಶ್ರೀಗಳ ವಿಚಾರಧಾರೆಯಲ್ಲಿ ನಿಸರ್ಗಕ್ಕೆ ಬೆಲೆ ಇದೆ, ಬದುಕಿಗೆ ಬೆಲೆ ಇದೆ, ಕಾಯಕಕ್ಕೆ ಗೌರವಿದೆ. ದಾಸೋಹಕ್ಕೆ ದಿವ್ಯತೆಯಿದೆ ಅನ್ನುವ ತತ್ವ ಸಾರಿ ಅದರಂತೆಯೆ ಬದುಕಿದವರು. ಸ್ವಾಮೀಜಿ ಕಂಡ್ರೆ ಜಗತ್ತಿಗೆ ಮಾತ್ರವಲ್ಲ ಮಠದ ಅವರಣದ ಸಾಕು ಪ್ರಾಣಿಗಳಿಗೂ ಹಿಗ್ಗು. ಮಠದ ಅವರಣದಲ್ಲಿ ಖಾವಿ ಧರಿಸಿದ ಚೇತನ ನಡೆಯುತ್ತಿದ್ರೆ ದನಕರುಗಳು, ನಾಯಿಮರಿಗಳು, ಓಡೋಡಿ ಬರುತ್ತಿದ್ದವು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು
ಶ್ರೀಮಠದಲ್ಲಿರುವ ಗೋಶಾಲೆಗೆ ದಿನಕೊಮ್ಮೆಯಾದ್ರೂ ಹೋಗಿ ಬರದಿದ್ರೆ ಸ್ವಾಮೀಜಿಗಳಿಗೆ ಸಮಾಧಾನವೇ ಇರುತ್ತಿರಲಿಲ್ಲ. ದನಕರುಗಳ ಮೈ ನೇವರಿಸಿ ಹಸಿ ಹುಲ್ಲು, ಬಾಳೆಹಣ್ಣು ಕೊಟ್ಟು ಪ್ರೀತಿ ತೋರುತ್ತಿದ್ದ ಗುರುಗಳು, ಮಠದ ಅವರಣದಲ್ಲಿ ಅಡ್ಡಾಡುವ ಬೀದಿನಾಯಿಗಳಿಗೆ ಬಿಸ್ಕೇಟು, ಊಟ ಹಾಕುತ್ತಿದ್ದರು.
ಅಷ್ಟೇ ಅಲ್ಲ ಬೆಟ್ಟ ಗುಡ್ಡಗಳ ಸುಂದರ ಪರಿಸರದಲ್ಲಿದ್ದ ಸಿದ್ದಗಂಗೆಯ ಬೆಟ್ಟದಲ್ಲಿದ್ದ ಒಂದು ಸುಂದರ ಜಿಂಕೆಗೆ ಶ್ರೀಗಳನ್ನು ಕಂಡ್ರೆ ಭಾರೀ ಪ್ರೀತಿಯಂತೆ. ಕೈಗೆ ಸಿಗುತ್ತಿದ್ದ ಈ ಜಿಂಕೆಗೂ ಪ್ರೀತಿಯಿಂದ ಆಹಾರ ಕೊಡುತ್ತಿದ್ರು ಶ್ರೀಗಳು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ
ಇನ್ನು ನವಿಲಿಗೂ ಆಹಾರ ನೀಡುತ್ತಿದ್ದ ಗುರುಗಳ ಭಾವಚಿತ್ರ ಎಂತವರಿಗೂ ಅಚ್ಚರಿ ಮೂಡಿಸುವಂತಿದೆ. ಇನ್ನು ವಾರ್ಷಿಕವಾಗಿ ಮಠದ ಅವರಣದಲ್ಲಿ ದನಗಳ ಪರಿಷೆಯನ್ನು ಮಾಡಿಸುತ್ತಿದ್ದರು. ರೈತರು ತಮಗೆ ಬೇಕಾದ ರಾಸುಗಳನ್ನು ಆರಿಸಿಕೊಳ್ಳಲು ಈ ಪರಿಷೆಯಿಂದ ಸಾಧ್ಯವಾಗುತ್ತಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv