ಉಡುಪಿ: ಸಿದ್ದಗಂಗಾಶ್ರೀಗಳಿಗೆ ಭಾರತರತ್ನ ಗೌರವ ಸಿಗಬೇಕು. ಆ ಗೌರವಕ್ಕೆ ಶಿವಕುಮಾರ ಸ್ವಾಮೀಜಿಗಳು ಅರ್ಹರು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಶ್ರೀಗಳ 110ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇಶದಲ್ಲಿ ಹಲವರಿಗೆ ಭಾರತ ರತ್ನ ಪ್ರಶಸ್ತಿಯ ಗೌರವ ಸಿಕ್ಕಿದೆ. ಅವರೆಲ್ಲರಿಗಿಂತ ಇವರ ಸಾಧನೆ ಹೆಚ್ಚಿದೆ. ಕೇಂದ್ರ ಸರ್ಕಾರಕ್ಕೆ ಹೆಸರು ಸೂಚಿಸುವ ಅವಕಾಶ ಸಿಕ್ಕರೆ ಸಿದ್ದಗಂಗಾ ಶ್ರೀಗಳ ಹೆಸರು ಸೂಚಿಸಲು ನಾನು ಸಿದ್ಧನಿದ್ದೇನೆ. ಶ್ರೀಗಳ ಸುದೀರ್ಘ ಕಾಲದ ಸಾಧನೆಗೆ ಗೌರವ ಸಿಗಬೇಕು ಎಂದು ಪೇಜಾವರಶ್ರೀ ಹೇಳಿದರು. ಬಹುಕಾಲ ಶಿವಕುಮಾರ ಸ್ವಾಮೀಜಿಯವರ ಸೇವೆ- ಮಾರ್ಗದರ್ಶನ ಮನುಕುಲಕ್ಕೆ ಸಿಗಬೇಕು ಎಂದು ಹಾರೈಸಿದರು.
ಸಿದ್ದಗಂಗಾ ಮಠಕ್ಕೆ ಭೇಟಿನೀಡಿದ ಮತ್ತು ಈವರೆಗಿನ ಒಡನಾಟಗಳನ್ನು ನೆನಪಿಸಿಕೊಂಡ ಅವರು, ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ನಾವಿಬ್ಬರು ಜೊತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ಸಮಾಜದ ಏಳಿಗೆಗಾಗಿ ಹೋರಾಟ ಮಾಡಿದವರಲ್ಲಿ ಶಿವಕುಮಾರ ಸ್ವಾಮೀಜಿಗಳ ಪಾತ್ರ ಬಲು ದೊಡ್ಡದು ಎಂದು ಹೇಳಿದರು.
110 ನೇ ವಯಸ್ಸಿನಲ್ಲಿ ಇಷ್ಟು ಲವಲವಿಕೆಯಿಂದ ಇದ್ದಾರೆ ಅಂದ್ರೆ ಅವರ ಇಷ್ಟು ವರ್ಷದ ಸಾಧನೆ ಮುಖ್ಯವಾಗುತ್ತದೆ. ನಾಡಿಗೆ ಶಿವಕುಮಾರ ಸ್ವಾಮೀಜಿ ನೀಡಿರುವ ಕೊಡುಗೆ ದೊಡ್ಡದು. ಅವರ ಮಾರ್ಗದರ್ಶನ ಹಲವು ವರ್ಷಗಳ ಕಾಲ ಮುಂದುವರೆಯಬೇಕು. ಈ ದೇಶದ ಅತೀ ದೊಡ್ಡ ಗೌರವ ಸಿದ್ದಗಂಗಾ ಮಠಾಧೀಶ ಶಿವಕುಮಾರಸ್ವಾಮೀಜಿ ಅವರಿಗೆ ಸಿಗಲೇಬೇಕು ಎಂದರು.
ಧ್ಯಾನ- ಪೂಜೆ- ಆಹಾರ ಪದ್ಧತಿ ಮತ್ತು ದೇಹ ಪ್ರಕೃತಿ ಮತ್ತು ಮನದ ಆಲೋಚನೆ ಆರೋಗ್ಯಕರವಾಗಿರುವುದರಿಂದ ಶ್ರೀಗಳು ಬಹುಕಾಲ ನಮ್ಮ ಜೊತೆ ಇರುವುದಕ್ಕೆ ಸಾಧ್ಯವಾಗಿದೆ. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಇದು ದೈವದತ್ತವಾಗಿ ಬಂದಿರುವುದು ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಗುರು ಉದ್ದಾನ ಶ್ರೀಗಳ ಜಾತ್ಯಾತೀತ ನೀತಿ ಶ್ರೀಮಠದ ಬೆಳವಣಿಗೆಯ ಶಕ್ತಿಮೂಲ: ಸಿದ್ದಗಂಗಾ ಶ್ರೀ