ರಾಮನಗರ: ತುಮಕೂರಿನ ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಪೂರ್ವಾಶ್ರಮದ ಸೋದರ ಬಿ.ಎಸ್.ಚಂದ್ರಶೇಖರಯ್ಯ (72) ಶಿವೈಕ್ಯರಾಗಿದ್ದಾರೆ.
ಮಾಗಡಿ ತಾಲೂಕಿನ ಬಂಡೇಮಠ ಗ್ರಾಮದ ನಿವಾಸಿಯಾಗಿದ್ದ ಬಿ.ಎಸ್.ಚಂದ್ರಶೇಖರಯ್ಯ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನೌಕರರಾಗಿ, ಬಂಡೇಮಠದ ಮ್ಯಾನೇಜರ್ ಆಗಿ ಸೇವೆಸಲ್ಲಿಸಿದ್ದರು. 10 ವರ್ಷದ ಹಿಂದೆ ನಿವೃತ್ತಿಗೊಂಡು ವ್ಯವಸಾಯ ಮಾಡಿಕೊಂಡಿದ್ದರು.
ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ. ಮೃತ ಬಿ.ಎಸ್.ಚಂದ್ರಶೇಖರಯ್ಯರ ಅಂತ್ಯಕ್ರಿಯೆ ಬಂಡೇಮಠದ ತೋಟದಲ್ಲಿ ಶನಿವಾರ 12.30 ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ಅಂತ್ಯಕ್ರಿಯೆಯಲ್ಲಿ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಬಂಡೇಮಠದ ಬಸವಲಿಂಗಸ್ವಾಮೀಜಿ, ಗುಮ್ಮಸಂದ್ರ ಚಂದ್ರಶೇಖರ ಸ್ವಾಮೀಜಿ, ಜಡೇದೇವರ ಮಠದ ಹಿಮ್ಮಡಿ ಬಸವರಾಜ ಸ್ವಾಮೀಜಿ, ಬೆಟ್ಟಹಳ್ಳಿ ಚಂದ್ರಶೇಖರಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.